ದುರ್ಗಾಪುರ (ಪಶ್ಚಿಮ ಬಂಗಾಳ) (ಪಿಟಿಐ): ಚುನಾವಣಾ ಆಯೋಗದ ನಿರ್ದೇಶನದಂತೆ ಅಧಿಕಾರಿಗಳ ವರ್ಗಾವಣೆ ಮಾಡಲಾಗದು ಎಂದು ಸವಾಲು ಎಸೆದಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಪಟ್ಟು ಸಡಿಲಿಸಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಒಪ್ಪಿಕೊಂಡಿದ್ದಾರೆ.
‘ಚುನಾವಣಾ ಆಯೋಗದ ನಿರ್ದೇಶನದಂತೆ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತೇನೆ’ ಎಂದು ಮಂಗಳವಾರ ರಾತ್ರಿ ಆತುರಾತುರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಮತಾ ಸ್ಪಷ್ಟಪಡಿಸಿ, ಆಯೋಗದೊಂದಿಗಿನ ಸಂಘರ್ಷಕ್ಕೆ ತೆರೆ ಎಳೆದರು. ‘ಇದರಿಂದ ನನಗೆ ಒಳ್ಳೆಯದೇ ಆಗುತ್ತದೆ. ರಾಜ್ಯದ ಎಲ್ಲಾ ಅಧಿಕಾರಿಗಳೊಂದಿಗೆ ನನಗೆ ಉತ್ತಮ ಸಂಪರ್ಕವಿದೆ’ ಎಂದು ಮಮತಾ ಹೇಳಿದರು.
ಅಧಿಕಾರಿಗಳ ವಿರುದ್ಧದ ದೂರುಗಳು ಬಂದ ಹಿನ್ನೆಲೆಯಲ್ಲಿ ಚುನಾವಣೆ ಕಾರ್ಯಕ್ಕೆ ನಿಯೋಜಿತರಾಗಿದ್ದ ನಾಲ್ವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಒಬ್ಬ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗ ನಿರ್ದೇಶಿಸಿತ್ತು.
ಆಯೋಗದ ಈ ಕ್ರಮದ ವಿರುದ್ಧ ಸೋಮವಾರ ಚುನಾವಣಾ ಭಾಷಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ ಮಮತಾ, ‘ನನ್ನನ್ನು ಜೈಲಿಗಟ್ಟಿದರೂ ಸರಿ, ಅಧಿಕಾರಿಗಳನ್ನು ಈಗಿರುವ ಜಾಗದಿಂದ ಕದಲಿಸುವುದಿಲ್ಲ’ ಎಂದು ಅವರು ಹೇಳಿದ್ದರು.
ಮಂಗಳವಾರ ಸಂಜೆಯ ತನಕವೂ ಮಮತಾ ಆಯೋಗದ ವಿರುದ್ಧ ಗುಡುಗು ಮುಂದುವರಿಸಿದ್ದ ಮಮತಾ, ‘ಸಂವಿಧಾನ ಎಂದರೆ ಏನೆಂಬುದು ನನಗೆ ಗೊತ್ತು. ನಾನು ಸಂವಿಧಾನಕ್ಕೆ ಬದ್ಧವಾಗಿದ್ದೇನೆ. ನಾನು ನಿಮಗೆ (ಚುನಾವಣಾ ಆಯೋಗಕ್ಕೆ) ಗೌರವ ನೀಡುತ್ತೇನೆ. ಅದೇ ವೇಳೆ, ನನ್ನನ್ನು ಅಪಮಾನಿಸಲು ನಿಮಗೆ ಹಕ್ಕು ನೀಡಿಲ್ಲ’ ಎಂದು ಚುನಾವಣಾ ಪ್ರಚಾರ ಭಾಷಣದಲ್ಲಿ ಚಾಟಿ ಬೀಸಿದ್ದರು.
ಆದರೆ ಮತ್ತೊಂದೆಡೆ ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಆಯೋಗಕ್ಕೆ ಪತ್ರ ಬರೆದು ವರ್ಗಾವಣೆ ನಿರ್ದೇಶನವನ್ನು ಪುನರ್ ಪರಿಶೀಲಿಸುವಂತೆ ಕೋರಿದ್ದರು.
ಆದರೆ ಇದಕ್ಕೆ ಒಪ್ಪದ ಆಯೋಗವು ಬುಧವಾರ (ಏ.9) ಬೆಳಿಗ್ಗೆ 10 ಗಂಟೆಯೊಳಗೆ ಅಧಿಕಾರಿಗಳನ್ನು ವರ್ಗಾಯಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿತ್ತು.