ಜೈಪುರ (ಐಎಎನ್ಎಸ್): ರಾಜಸ್ತಾನದಲ್ಲಿ ಜ.26ರಂದು ಸರಣಿ ಬಾಂಬ್ಗಳನ್ನು ಸ್ಫೋಟಿಸುವುದಾಗಿ ಗೃಹ ಸಚಿವರೂ ಸೇರಿದಂತೆ ರಾಜ್ಯದ ಒಟ್ಟು ಆರು ಸಚಿವರಿಗೆ ಬೆದರಿಕೆಯ ಇ – ಮೇಲ್ ಸಂದೇಶ ಬಂದಿದೆ. ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಈ ಬೆದರಿಕೆ ಸಂದೇಶ ಕಳುಹಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
‘ನಿಮಗೆ ದೊಡ್ಡ ಆಶ್ಚರ್ಯ ಕಾದಿದೆ ಎಚ್ಚರಿಕೆಯಿಂದಿರಿ’ ಎಂದು ಸಚಿವರಿಗೆ ಬಂದಿರುವ ಇ– ಮೇಲ್ನಲ್ಲಿ ಎಚ್ಚರಿಕೆ ನೀಡಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ. ‘ಜನವರಿ 26ರಂದು ಬಾಂಬ್ ಸ್ಫೋಟ ಮಾಡುವ ಬೆದರಿಕೆಯ ಸಂದೇಶ ಸಚಿವರಿಗೆ ಬಂದಿರುವುದು ನಿಜ’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಒಮೇಂದ್ರ ಭಾರದ್ವಾಜ್ ದೃಢಪಡಿಸಿದ್ದಾರೆ.
‘ಡಿಸೆಂಬರ್ 22ರಂದು ಸಂಜೆ 5.45ರ ಸುಮಾರಿಗೆ ಇ– ಮೇಲ್ ಸಂದೇಶ ಬಂದಿರುವುದು ಗುರುವಾರ ಗೊತ್ತಾಗಿದೆ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ಬೆದರಿಕೆ ಬಂದಿರುವ ಕಾರಣ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ’ ಎಂದು ಅವರು ಹೇಳಿದ್ದಾರೆ. ಇಂಡಿಯನ್ ಮುಜಾಹಿದೀನ್ ಈ ಹಿಂದೆ ಜೈಪುರದ ಜನನಿಬಿಡ ಮಾರುಕಟ್ಟೆಯಲ್ಲಿ ನಡೆಸಿದ ಪ್ರಬಲ ಬಾಂಬ್ ಸ್ಫೋಟದಲ್ಲಿ ಅನೇಕರು ಸಾವನ್ನಪ್ಪಿದರು.
ಗಾಲಿಗಳ ಮೇಲೆ ಅರಮನೆ ವಿಶೇಷ ರೈಲು ಸೇರಿದಂತೆ ರಾಜಸ್ತಾನದಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಸಂಚು ನಡೆಸಿದ್ದ ಉಗ್ರ ತೆಹಸಿನ್ ಅಖ್ತರ್ ಮತ್ತು ಆತನ ಸಹಚರರನ್ನು ಪೊಲೀಸರು ಬಂಧಿಸಿದ್ದರು. ಅದಕ್ಕೂ ಮುನ್ನ ಉಗ್ರರು ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕಿದ್ದರು.
ಐ.ಎಸ್.ಐ.ಎಸ್ ಬೆಂಬಲಿತ ಅನ್ಸುರುಲ್ ತಾವಿದ್ ಉಗ್ರ ಸಂಘಟನೆ ರಾಜಸ್ತಾನದಲ್ಲಿ ಯುವಕರನ್ನು ನೇಮಕ ಮಾಡಿಕೊಂಡಿತ್ತು. ಭಾರತ ಮೂಲದ ಸುಲ್ತಾನ್ ಆರ್ಮರ್ ಎಂಬ ವ್ಯಕ್ತಿ ಯುವಕರನ್ನು ಉಗ್ರ ಸಂಘಟನೆಗೆ ನೇಮಕ ಮಾಡಿಕೊಳ್ಳುತ್ತಿದ್ದ ಘಟನೆ ತನಿಖೆ ವೇಳೆ ತಿಳಿದು ಬಂದಿತ್ತು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.