ಬೆಂಗಳೂರು: ಕಾಡುಗೋಡಿ ಸಮೀಪದ ಬೆಳತ್ತೂರು ಗ್ರಾಮದಲ್ಲಿ ಭಾನುವಾರ ಮಹಿಳೆಯೊಬ್ಬರಿಗೆ ಮರ್ಮಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ ಅಶೋಕ್ (26) ಎಂಬಾತನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಅಶೋಕ್, ವೈಟ್ಫೀಲ್ಡ್ ಸಮೀಪದ ಜಂಬೂ ಸವಾರಿ ದಿಣ್ಣೆಯಲ್ಲಿ ವಾಸವಾಗಿದ್ದ. ಕಾರು ಚಾಲಕನಾದ ಆತ ಬೆಳತ್ತೂರು ಗ್ರಾಮದಲ್ಲಿರುವ ಮಂಜುನಾಥ್ ಎಂಬ ಸ್ನೇಹಿತನ ಮನೆಯ ಬಳಿ ಬಂದಿದ್ದಾಗ ಈ ಘಟನೆ ನಡೆದಿದೆ.
ಅಶೋಕ್, ಸ್ನೇಹಿತನ ಮನೆ ಮುಂದೆ ನಿಂತು ಮೂತ್ರವಿಸರ್ಜನೆ ಮಾಡುತ್ತಿದ್ದ. ಈ ವೇಳೆ ಸಮೀಪದಲ್ಲೇ ಬಟ್ಟೆ ತೊಳೆಯುತ್ತಿದ್ದ ಮಹಿಳೆ, ದೂರ ಹೋಗಿ ಮೂತ್ರವಿಸರ್ಜನೆ ಮಾಡುವಂತೆ ಹೇಳಿದ್ದಾರೆ. ಆಗ ಆತ ಅವರ ಕಡೆಗೆ ತಿರುಗಿ ಮರ್ಮಾಂಗ ತೋರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಮಹಿಳೆಯು ಅಕ್ಕಪಕ್ಕದ ಮನೆಯವರಿಗೆ ಈ ವಿಷಯ ತಿಳಿಸಿದ್ದಾರೆ. ಬಳಿಕ ನೆರೆಹೊರೆಯವರು ಅಶೋಕ್ನನ್ನು ಹಿಡಿದು ಥಳಿಸಿ, ಠಾಣೆವರೆಗೆ ಮೆರವಣಿಗೆ ಮಾಡಿದ್ದಾರೆ. ಅಶೋಕ್ ವಿರುದ್ಧ ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಮತ್ತು ಅನುಚಿತ ವರ್ತನೆ ತೋರಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಲೈಂಗಿಕ ದೌರ್ಜನ್ಯ: ಇಬ್ಬರ ಬಂಧನ
ಅಶೋಕನಗರದಲ್ಲಿ ಮೂವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಇಬ್ಬರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಅಜೀಜ್ ಉಲ್ಲಾ ಖಾನ್ (50) ಮತ್ತು ಸಾದಿಕ್ ಅಹಮದ್ (30) ಬಂಧಿತರು.
ಆರೋಪಿಗಳು ಕೆಲಸ ಕೊಡಿಸುವುದಾಗಿ ಬಾಲಕಿಯರನ್ನು ಮೂರು ತಿಂಗಳ ಹಿಂದೆ ಬಳ್ಳಾರಿಯಿಂದ ಕರೆದುಕೊಂಡು ಬಂದಿದ್ದರು. ನಂತರ ಮನೆಯಲ್ಲಿ ಕೂಡಿ ಹಾಕಿದ್ದರು. ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಗುರುವಾರ (ನ. 20) ಅವರ ಮನೆ ಮೇಲೆ ದಾಳಿ ನಡೆಸಿ ಬಾಲಕಿಯರನ್ನು ರಕ್ಷಿಸಿ ಹೊಸೂರು ರಸ್ತೆಯಲ್ಲಿರುವ ಸರ್ಕಾರಿ ಬಾಲಮಂದಿರಕ್ಕೆ ಕಳುಹಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆಪ್ತ ಸಮಾಲೋಚನೆ ಮೂಲಕ ವಿಚಾರಿಸಿ ದಾಗ ಆರೋಪಿಗಳು ಲೈಂಗಿಕ ದೌರ್ಜನ್ಯ ಎಸಗಿ ರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅಶೋಕನಗರ ಠಾಣೆಗೆ ದೂರು ನೀಡಿದ್ದರು. ಆ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.