ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ ರಾಣಿಯಿಂದ ಕನ್ನಡದಲ್ಲಿ ಪ್ರಕಟಣೆ

ಬೆಳಗಾವಿಯಲ್ಲಿ 1911ರ ಆಹ್ವಾನ ಪತ್ರ ಪತ್ತೆ
Last Updated 2 ಜನವರಿ 2015, 19:30 IST
ಅಕ್ಷರ ಗಾತ್ರ

ಬೆಳಗಾವಿ: ದೇಶದಲ್ಲಿ ಬ್ರಿಟಿಷರ ಆಡಳಿತದ ಅವಧಿ­ಯಲ್ಲಿ ಇಂಗ್ಲೆಂಡ್‌ ರಾಣಿಯು ದೇಶಿ ಸಂಸ್ಥಾನಗಳ ಅರ­ಸರು, ಸಂಸ್ಥಾನಿ­ಕರು, ಪ್ರಾಂತ್ಯ ಪ್ರತಿನಿಧಿ­ಗಳಿಗೆ 1911ರಲ್ಲಿ ಅಚ್ಚ ಕನ್ನಡದಲ್ಲಿ ಕಳುಹಿ­ಸಿದ್ದ ಆಹ್ವಾನ ಪತ್ರ ಮತ್ತು ‘ಆಭಾರ ಮನ್ನಣೆ’ ಪ್ರಕಟಣಾ ಪತ್ರವು ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಕಣಬರ್ಗಿಯಲ್ಲಿ ಪತ್ತೆ­ಯಾಗಿವೆ.

ಸ್ವಾತಂತ್ರ್ಯ ಪೂರ್ವದಲ್ಲೇ ಬೆಳಗಾವಿ­ಯಲ್ಲಿ ಕನ್ನಡ ಭಾಷೆ ಬಳಕೆಯಲ್ಲಿತ್ತು ಎನ್ನುವುದನ್ನು ಇವು ಪುಷ್ಟೀಕರಿಸುತ್ತವೆ.  ರಾಜ್ಯ ವಕೀಲರ ಸಾಹಿತ್ಯ ಪರಿಷತ್‌ ಕಲ­ಬರ್ಗಿ­ಯಲ್ಲಿ ದಾಖಲೆ ಸಂಗ್ರಹ ಅಭಿ­ಯಾ­ನವನ್ನು ಹಮ್ಮಿಕೊಂಡಿದ್ದಾಗ ಪಾಟೀಲ ಬೀದಿಯ ನಿವಾಸಿ ಮಹಾ­ನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಭೀಮಗೌಡ ಪಾಟೀಲ ಅವರ ಮನೆ­ಯಲ್ಲಿ ಈ ಮಹತ್ವದ ದಾಖಲೆಗಳು ದೊರೆತಿವೆ.

ಇಂಗ್ಲೆಂಡ್‌ನ ರಾಣಿಯ ಪುತ್ರ ಪ್ರಿನ್ಸ್‌ ಆಫ್‌ ವೇಲ್ಸ್‌ ಅವರನ್ನು ‘ಮಲಿಕ್‌ ಮುಅ­ಝಮ್‌ ಕೈಸರೇ ಹಿಂದ್‌’ (ಭಾರತದ ಆಡಳಿತಾಧಿಕಾರಿ) ಆಗಿ ನೇಮಿಸಿದ ಬಳಿಕ 1911ರ ಜೂನ್‌ 22ರಂದು ರಾಜ್ಯಾಭಿಷೇಕ ಮಹೋತ್ಸವ­ವನ್ನು ದೆಹಲಿಯಲ್ಲಿ ಹಮ್ಮಿಕೊಳ್ಳ­ಲಾ­ಗಿತ್ತು. ಈ ಸಮಾರಂಭದಲ್ಲಿ ಗವರ್ನರ್‌, ಲೆಫ್ಟಿನೆಂಟ್‌ ಗವರ್ನರ್‌, ಮತ್ತು ಅಮ­ಲ್‌­ದಾರರು ಮತ್ತು ದೇಶಿ ಸಂಸ್ಥಾನಗಳ ಅರಸರು, ಸಂಸ್ಥಾನಿಕರು ಮತ್ತು ಸರದಾ­ರರು ಹಾಗೂ ಹಿಂದಿ ಸಾಮ್ರಾಜ್ಯ­ದೊಳಗಿನ ಎಲ್ಲ ಪ್ರಾಂತಗಳ ಪ್ರತಿನಿಧಿಗಳು ಪಾಲ್ಗೊಳ್ಳಬೇಕು ಎಂದು ರಾಣಿಯು 1911ರ ಮಾರ್ಚ್‌ 22ರಂದು ಆಹ್ವಾನ ಪತ್ರದ ಪ್ರಕಟಣೆ­  ಹೊರಡಿಸಿದ್ದರು. ಮಹೋತ್ಸವ ನಡೆದ ಬಳಿಕ 1911ರ ಡಿ. 12ರಂದು ರಾಣಿಯು ‘ಆಭಾರ ಮನ್ನಣೆ’ ಪತ್ರವನ್ನು ಹೊರಡಿಸಿದ್ದರು.

ಆಹ್ವಾನ ಪತ್ರವನ್ನು ಖಾಕಿ ಕಾಗದದ ಮೇಲೆ ಅಕ್ಷರಗಳನ್ನು ಕಂದು ಬಣ್ಣದಲ್ಲಿ ಕನ್ನಡ ಭಾಷೆಯಲ್ಲಿ ಮುದ್ರಿಸಲಾಗಿತ್ತು. ಈ ಪತ್ರವು 1.5 ಅಡಿ ಅಗಲ ಹಾಗೂ 2.5 ಅಡಿ ಉದ್ದ ಇದೆ. ‘ಆಭಾರ ಮನ್ನಣೆ’ ಪತ್ರವನ್ನು ಖಾಕಿ ಕಾಗದದ ಮೇಲೆ ಅಕ್ಷರಗಳನ್ನು ಕೆಂಪು ಬಣ್ಣದಲ್ಲಿ ಮುದ್ರಿಸಲಾಗಿತ್ತು. ಈ ಪತ್ರವು 10 ಇಂಚು ಅಗಲ ಹಾಗೂ 16 ಇಂಚು ಉದ್ದ ಇದೆ. ಎರಡೂ ಪತ್ರಗಳ ಮೇಲಿನ ಭಾಗದಲ್ಲಿ ಬ್ರಿಟಿಷ್‌ ರಾಷ್ಟ್ರ ಮುದ್ರೆ ಇತ್ತು. ಈ ಪತ್ರವನ್ನು ಬಾಂಬೆಯ (ಮುಂಬೈ) ಸರ್ಕಾರಿ ಕೇಂದ್ರ ಮುದ್ರಣಾ­ಲಯದಲ್ಲಿ ಮುದ್ರಿಸಲಾಗಿದೆ ಎಂದು ಕೆಳಗಡೆ ಇಂಗ್ಲಿಷ್‌ನಲ್ಲಿ ಮುದ್ರಿಸಲಾ­ಗಿದೆ. ಜೊತೆಗೆ ಈ ಪತ್ರವನ್ನು ಕನ್ನಡಕ್ಕೆ ಅನುವಾದ ಮಾಡಿರುವವರ ಹೆಸರನ್ನೂ ನಮೂದಿಸಲಾಗಿದೆ.

ಶಿವನಗೌಡರ ತಂದೆ ಭೀಮಗೌಡ ಸಿದ್ಧಗೌಡ ಪಾಟೀಲ ಅವರು ಪೊಲೀಸ್‌ ಪಾಟೀಲರಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಆ ಸಂದರ್ಭದಲ್ಲಿ ಇವರಿಗೆ ರಾಜ್ಯಾರೋಹಣ ಮಹೋತ್ಸವದ ಆಹ್ವಾನ ಪತ್ರವು ಕಣಬರ್ಗಿಯ ವಿಳಾ­ಸಕ್ಕೆ ಬಂದಿತ್ತು. ಬಳಿಕ ಅವರು ದೆಹಲಿಗೆ ಹೋಗಿ ಸಮಾರಂಭದಲ್ಲಿ ಪಾಲ್ಗೊಂಡಿ­ದ್ದರು. ನಂತರ ‘ಆಭಾರ ಮನ್ನಣೆ’ ಪತ್ರವನ್ನೂ ಇವರಿಗೆ ಕಳುಹಿಸಲಾಗಿತ್ತು.

ಈ ಮಹತ್ವದ ದಾಖಲೆಗಳನ್ನು ಭೀಮ­ಗೌಡ ಸಿದ್ಧಗೌಡ ಪಾಟೀಲರ ಮಕ್ಕಳಾದ ಶಿವನಗೌಡ ಪಾಟೀಲ ಹಾಗೂ ಬಾಳ­ಗೌಡ ಪಾಟೀಲ ಅವರು ರಾಜ್ಯ ವಕೀಲರ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರವೀಂದ್ರ ತೋಟಿಗೇರ ಹಾಗೂ ಉಪಾಧ್ಯಕ್ಷ ಸುಧೀರ ನಿರ್ವಾಣಿ ಅವರಿಗೆ ನೀಡಿದ್ದಾರೆ.

‘ಜಾಗತಿಕ ಮಟ್ಟದಲ್ಲಿ ಗಮನಿಸಿ­ದರೂ ಬೆಳಗಾವಿ ಕನ್ನಡದ ಭೂಪ್ರ­ದೇಶ­ವಾಗಿತ್ತು ಎಂಬುದು ಈ ಎರಡು ಪತ್ರ­ಗಳ ಮೂಲಕ ತಿಳಿದು ಬರುತ್ತದೆ. ಬೆಳ­ಗಾವಿ ತಾಲ್ಲೂಕಿನ ಕಣಬರ್ಗಿ ಗ್ರಾಮದ ಭೀಮಗೌಡ ಪಾಟೀಲರಿಗೆ ಇಂಗ್ಲೆಂಡ್‌ ರಾಣಿಯ ಪರ­ವಾಗಿ ಅಚ್ಚ ಕನ್ನಡದಲ್ಲಿ ಕಳುಹಿ­ಸಿರುವ ಈ ಎರಡು ಪತ್ರಗಳು, ಬೆಳಗಾವಿ ಅಪ್ಪಟ ಕನ್ನಡ ಪ್ರದೇಶವಾ­ಗಿತ್ತು ಎಂಬುದನ್ನು ಸಾರಿ ಹೇಳುತ್ತಿವೆ’ ಎಂದು ರವೀಂದ್ರ ತೋಟಿಗೇರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕನ್ನಡ ಭಾಷೆಯಲ್ಲಿರುವ 1928ರ ‘ಆಸ್ತಿ ಖರೀದಿ ಪತ್ರ’, ಅರಣ್ಯ ಇಲಾಖೆ­ಯಿಂದ 1929ರಲ್ಲಿ ಸೌದೆ ಕಡಿಯಲು ಪಡೆದಿರುವ ಪರವಾನಗಿ ಪತ್ರ, 1939 ರಲ್ಲಿ ಸರ್ವೆ ಮಾಡಿಸಲು ಹಣ ಪಾವತಿಸಿ­ರುವ ರಸೀದಿ ಪತ್ರ ಹಾಗೂ 1940ರಲ್ಲಿ ನ್ಯಾಯಾಲಯಕ್ಕೆ ಶುಲ್ಕ ತುಂಬಿದ ರಸೀದಿ ಪತ್ರ ಶಿವನಗೌಡರ ಮನೆಯಲ್ಲಿ ಸಿಕ್ಕಿವೆ. ಈ ಎಲ್ಲ ದಾಖಲೆಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು. ಇದನ್ನು ಸಂಶೋ­ಧನೆಗೆ ಬಳಸಿಕೊಳ್ಳಲಾಗು­ವುದು’ ಎಂದು ತೋಟಿಗೇರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT