ಮಂಗಳೂರು: ನಗರದ ಪಂಪ್ವೆಲ್ನ ಇಂಡಿಯಾನಾ ಆಸ್ಪತ್ರೆ ಹಾಗೂ ಹೃದಯಾಲಯವು ಎರಡು ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಅಪಘಾತ ಮತ್ತು ತುರ್ತು ಚಿಕಿತ್ಸೆ ವಿಭಾಗವನ್ನು ಗುರುವಾರ ಆರಂಭಿಸಿದೆ. ಉಪ ವಿಭಾಗಾಧಿಕಾರಿ ಡಾ.ಡಿ.ಆರ್.ಅಶೋಕ್ ಅವರು ಉದ್ಘಾಟಿಸಿದರು.
ಅಪಘಾತಕ್ಕೆ ಒಳಗಾದವರಿಗೆ ಇಲ್ಲಿ ತುರ್ತು ಚಿಕಿತ್ಸೆ ನೀಡುವುದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನುಭವ ಪಡೆದ ವೈದ್ಯರಿದ್ದಾರೆ. ತುರ್ತು ಚಿಕಿತ್ಸೆ, ಚಿಕಿತ್ಸೆ, ಎಲುಬಿನ ಚಿಕಿತ್ಸೆ ಮೊದಲಾದವುಗಳಿಗೆ ಬೇಕಾದ ಎಲ್ಲ ಸವಲತ್ತುಗಳಿವೆ ಎಂದು ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ ತಿಳಿಸಿದ್ದಾರೆ.
ಇಲ್ಲಿನ ಹೃದಯಾಲಯವು ದಕ್ಷಿಣ ಭಾರತದ ಅತ್ಯುತ್ತಮ ಹೃದಯಾಲಯಗಳಲ್ಲಿ ಒಂದಾಗಿದೆ. ಆಸ್ಪತ್ರೆಯು ಮಂಗಳೂರು ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಆಪಘಾತ ಚಿಕಿತ್ಸಾ ಕೇಂದ್ರಗಳನ್ನು ತೆರೆಯುವ ಯೋಜನೆಯನ್ನು ಹಾಕಿಕೊಂಡಿದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಡಾ.ಅಲಿ ಕುಂಬ್ಳೆ ಅವರು, ಈ ಸಂಸ್ಥೆಯು ಯಾವುದೇ ರೀತಿಯ ಕಠಿಣ ಶಸ್ತ್ರಚಿಕಿತ್ಸೆಗಳನ್ನೂ ನಿಭಾಯಿಸಬಲ್ಲುದು. ಮುಖ್ಯವಾಗಿ ಮಿದುಳು, ಬೆನ್ನೆಲುಬು ಇತ್ಯಾದಿ ಸಮಸ್ಯೆಗಳಿಗೆ ಬೇಕಾದ ಸಕಲ ಸೌಕರ್ಯ ಇಲ್ಲಿದೆ ಎಂದರು.