ಮೈಸೂರು: ಮೈಸೂರಿನ ಮಂದಿಗೆ ಇಂದಿನಿಂದಲೇ (ಜ. 13) ಸಂಕ್ರಾಂತಿ ಹಬ್ಬ. ಇಲ್ಲಿಯ ರಂಗಾಯಣದ ‘ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವದ ಮೂಲಕ ಜ. 18ರವರೆಗೆ ‘ರಂಗ ಸಂಕ್ರಾಂತಿ’ಯನ್ನು ಆಚರಿಸಲಿದ್ದಾರೆ.
ಶೇಕ್ಸ್ಪಿಯರ್ನ 450ನೇ ಜನ್ಮೋತ್ಸವ ಅಂಗವಾಗಿ ‘ಜಗದ ಜಾನಪದ ಬಹುಮುಖಿ ಶೇಕ್ಸ್ಪಿಯರ್’ ಹೆಸರಿನಲ್ಲಿ ಈ ಬಾರಿ ಜ. 13ರಿಂದ 18ರವರೆಗೆ ನಾಟಕೋತ್ಸವ ಇಲ್ಲಿಯ ರಂಗಾಯಣದ ಆವರಣದಲ್ಲಿ ನಡೆಯಲಿದೆ.
ಜ. 13ರಂದು ಸಂಜೆ 5 ಗಂಟೆಗೆ ರಂಗಾಯಣದ ವನರಂಗದಲ್ಲಿ ನಾಟಕೋತ್ಸವವನ್ನು ರಂಗಭೂಮಿ ಹಾಗೂ ಬಾಲಿವುಡ್ ನಟ, ನಿರ್ದೇಶಕ ನಾಸಿರುದ್ದಿನ್ ಷಾ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹಾಗೂ ರಂಗಭೂಮಿ, ಚಲನಚಿತ್ರ ನಟ ಪ್ರಕಾಶ ರೈ ಭಾಗವಹಿಸುವರು.
ಶಾಸಕ ವಾಸು ಅಧ್ಯಕ್ಷತೆ ವಹಿಸುವರು. ನಂತರ 7 ಗಂಟೆಗೆ ಕಲಾಮಂದಿರದಲ್ಲಿ ವಿಕ್ರಂ ಸೇಟ್ ಮತ್ತು ಜೇಮ್ಸ್ ಥರ್ಬರ್ ಅವರ ಕವನ ಹಾಗೂ ಸಣ್ಣಕಥೆಗಳ ಸಂಗ್ರಹದ ‘ಬೀಸ್ಟ್ಲಿ ಟೇಲ್ಸ್’ ಇಂಗ್ಲಿಷ್ ನಾಟಕವನ್ನು ನಿರ್ದೇಶಿಸಿ ನಟಿಸುತ್ತಿದ್ದಾರೆ ನಾಸಿರುದ್ದಿನ್ ಷಾ. ಈ ನಾಟಕವನ್ನು ಮುಂಬೈಯ ಮೋಟ್ಲಿ ತಂಡ ಪ್ರಸ್ತುತಪಡಿಸಲಿದೆ.
ಮಂಗಳವಾರ ಬೆಳಿಗ್ಗೆ 10 ಗಂಟೆಗೆ ರಂಗಾಯಣದ ಕಿಂದರಿಜೋಗಿ ಆವರಣದಲ್ಲಿ ಬೀದಿನಾಟಕಗಳ ಪ್ರದರ್ಶನಕ್ಕೆ ಹಿರಿಯ ರಂಗಕರ್ಮಿ ಪಿ. ಗಂಗಾಧರಸ್ವಾಮಿ ಚಾಲನೆ ನೀಡುವರು. ಸಂಜೆ 5.30 ಗಂಟೆಗೆ ಜನಮನ ತಂಡದ ಬೀದಿನಾಟಕ ಪ್ರದರ್ಶನಗೊಳ್ಳಲಿದೆ.
ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ‘ಬಹುರೂಪಿ ಚಲನಚಿತ್ರೋತ್ಸವ’ ಉದ್ಘಾಟನೆಯಾಗಲಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು ಉದ್ಘಾಟಿಸುವರು.
ಇದರೊಂದಿಗೆ ದಕ್ಷಿಣ ವಲಯ ಜಾನಪದ ಕಲಾ ಉತ್ಸವ ಪ್ರತಿ ದಿನ ರಂಗಾಯಣದ ವನರಂಗದಲ್ಲಿ ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಪ್ರಾಯೋಜಕತ್ವದಲ್ಲಿ ನಡೆಯಲಿದೆ. 17 ಹಾಗೂ 18ರಂದು ‘ಶೇಕ್ಸ್ಪಿಯರ್ ಭಾರತೀಯ ಅನುಸಂಧಾನ’ ವಿಚಾರ ಸಂಕಿರಣ ನಡೆಯಲಿದೆ. ಕರಕುಶಲ ವಸ್ತುಪ್ರದರ್ಶನ ಹಾಗೂ ಮಾರಾಟ, ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಇರುತ್ತದೆ.
‘ಎಲ್ಲ ಕಾಲಕ್ಕೂ, ಎಲ್ಲ ದೇಶಕ್ಕೂ, ಎಲ್ಲ ವರ್ಗಕ್ಕೂ ಇಷ್ಟವಾಗುವವನು, ದಕ್ಕುವವನು ಶೇಕ್ಸ್ಪಿಯರ್. ಹೀಗಾಗಿ, ಅವನನ್ನು ಜಗದ ಜಾನಪದ ಬಹುಮುಖಿ ಎಂದು ಕರೆದು, ಇದೇ ಶೀರ್ಷಿಕೆಯಲ್ಲಿ ನಾಟಕೋತ್ಸವ ಆಯೋಜಿಸಿದ್ದೇವೆ. ಅವನ ಕುರಿತ ನಾಟಕ, ಸಿನಿಮಾ, ವಿಚಾರ ಸಂಕಿರಣ ನಡೆಯಲಿದೆ. ಈ ಮೂಲಕ ಅವನ 450ನೇ ಜನ್ಮೋತ್ಸವವನ್ನು ಆಚರಿಸುತ್ತಿದ್ದೇವೆ’ ಎಂದು ರಂಗಾಯಣದ ನಿರ್ದೇಶಕ ಎಚ್. ಜನಾರ್ದನ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.