ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸೀಟು ಹಂಚಿಕೆ ಬಿಕ್ಕಟ್ಟು ಸೋಮವಾರವೂ ಮುಂದುವರಿದಿದ್ದು, ಬಿಜೆಪಿ– ಶಿವಸೇನೆ ಹಾಗೂ ಕಾಂಗ್ರೆಸ್– ಎನ್ಸಿಪಿ ನಡುವೆ ತೆರೆಮರೆಯಲ್ಲಿ ಚರ್ಚೆ ನಡೆಯುತ್ತಿದೆ. ಈ ಚುನಾವಣೆ 4 ರಾಜಕೀಯ ಪಕ್ಷಗಳಿಗೂ ಅತ್ಯಂತ ಮಹತ್ವದಾಗಿದ್ದು, ಮಂಗಳವಾರದೊಳಗೆ ಒಪ್ಪಂದ ಏರ್ಪಡುವ ಸಾಧ್ಯತೆಗಳು ದಟ್ಟವಾಗಿವೆ.
130 ಸ್ಥಾನಗಳನ್ನು ತನಗೆ ಬಿಟ್ಟುಕೊಡುವಂತೆ ಬಿಜೆಪಿ ಹೊಸ ಪ್ರಸ್ತಾವನೆ ಕಳುಹಿಸಿದೆ. ಕೆಲವೇ ಗಂಟೆಗಳ ಮೊದಲು 135ಸೀಟುಗಳಿಗಾಗಿ ಅದು ಪಟ್ಟು ಹಿಡಿದಿತ್ತು. ಸಂಜೆ ಹೊತ್ತಿಗೆ ನಿಲುವು ಸಡಿಲಿಸಿ ಐದು ಸ್ಥಾನಗಳನ್ನು ಕಡಿಮೆ ಕೊಟ್ಟರೂ ಪರವಾಗಿಲ್ಲ. ಅದಕ್ಕಿಂತ ಕಡಿಮೆಯಾದರೆ ಒಪ್ಪುವುದಿಲ್ಲ ಎಂಬ ಸಂದೇಶ ರವಾನಿಸಿತು. ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರೇ ದೂರವಾಣಿಯಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಮಾತನಾಡಿ ಹೊಸ ಪ್ರಸ್ತಾವನೆ ಇಟ್ಟಿದ್ದಾರೆಂದು ಬಿಜೆಪಿ ಮೂಲಗಳು ತಿಳಿಸಿವೆ.
‘ಶಿವಸೇನೆ ಜತೆಗಿನ 25 ವರ್ಷಗಳ ಮೈತ್ರಿ ಮುರಿದು ಬೀಳಬಾರದು ಎನ್ನುವ ಉದ್ದೇಶದಿಂದ ಹೊಸ ಪ್ರಸ್ತಾವನೆ ಕಳುಹಿಸಲಾಗಿದೆ. ನಮಗೆ ಇದೇ ಕ್ಷೇತ್ರ ಬೇಕು, ಅದೇ ಕ್ಷೇತ್ರ ಬೇಕು ಎಂದು ಕೇಳುವುದಿಲ್ಲ. ಈ ಪ್ರಸ್ತಾವನೆ ಉದಾರವಾಗಿದೆ. ಶಿವಸೇನೆ ಯಾವುದೇ ಕ್ಷೇತ್ರಗಳನ್ನು ಕೊಟ್ಟರೂ ಸ್ಪರ್ಧಿಸಲು ಸಿದ್ಧರಿದ್ದೇವೆ. 25 ವರ್ಷಗಳಿಂದ ಗೆಲುವು ಕಾಣದಿರುವ ಕ್ಷೇತ್ರಗಳನ್ನು ಕೊಟ್ಟರೂ ಅಭ್ಯಂತರವಿಲ್ಲ’ ಎಂದು ಮಹಾರಾಷ್ಟ್ರ ಉಸ್ತುವಾರಿ ಹೊತ್ತಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೀವ್ ಪ್ರತಾಪ್ ರೂಡಿ ಪತ್ರಕರ್ತರಿಗೆ ತಿಳಿಸಿದರು.
ಉದ್ಧವ್ ಠಾಕ್ರೆ ಬಿಗಿ ನಿಲುವು: ಆದರೆ, ಬಿಜೆಪಿಗೆ 119 ಸ್ಥಾನಗಳಿಗಿಂತ ಹೆಚ್ಚಿಗೆ ಕೊಡುವ ಮಾತೇ ಇಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಬಿಗಿ ನಿಲುವು ತಳೆದಿದ್ದಾರೆ. ಅವರ ಮನವೊಲಿಸಲು ತೆರೆ ಮರೆಯಲ್ಲಿ ಬಿಜೆಪಿ ಹಿರಿಯ ನಾಯಕರು ಕಸರತ್ತು ಮುಂದುವರಿಸಿದ್ದಾರೆ. ಇದು ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆದಿರುವ ಕಿತ್ತಾಟ ಅಲ್ಲ. ಚುನಾವಣೆ ನಂತರ ಈ ವಿಷಯ ಪ್ರಸ್ತಾಪಕ್ಕೆ ಬರಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬಿಜೆಪಿ 130 ಕ್ಷೇತ್ರಗಳ ಪ್ರಸ್ತಾವನೆ ಕಳುಹಿಸುವ ಮೊದಲು ಶಿವಸೇನೆ ಜತೆ ಒಪ್ಪಂದ ಸಾಧ್ಯವಾಗದಿದ್ದರೆ 288 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡುವುದಾಗಿ ಹೇಳಿತ್ತು. ಸೀಟು ಹಂಚಿಕೆ ಹೊಂದಾಣಿಕೆಗೆ ಮಿತ್ರ ಪಕ್ಷ ಯಾವುದೇ ರಚನಾತ್ಮಕ ಮಾತುಕತೆ ನಡೆಸದೆ ಟಿ.ವಿ ಚಾನಲ್ಗಳಲ್ಲಿ ಚರ್ಚೆ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ‘ನಾವು ಹೆಚ್ಚುಕಡಿಮೆ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ್ದೇವೆ. ಕೇವಲ 20–30 ಸ್ಥಾನಗಳನ್ನು ಖಾಲಿ ಇಡಲಾಗಿದೆ. ಬೇರೆ ಪಕ್ಷಗಳಿಂದ ಬರುವ ಮುಖಂಡರಿಗಾಗಿ ಅವುಗಳನ್ನು ಉಳಿಸಿಕೊಳ್ಳಲಾಗಿದೆ’ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಎನ್ಸಿಪಿ– ಕಾಂಗ್ರೆಸ್ ಮಾತುಕತೆ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿ ನಡುವೆ ಸೀಟು ಹೊಂದಾಣಿಕೆ ಮಾತುಕತೆ ಮುಂದುವರಿದಿದೆ. ಮಂಗಳವಾರ ಬೆಳಿಗ್ಗೆ ಎಂಪಿಸಿಸಿ ಮುಖಂಡರ ಸಭೆ ನಡೆಯಲಿದೆ. ಅನಂತರ ಕಾಂಗ್ರೆಸ್ ಮತ್ತು ಎನ್ಸಿಪಿ ನಾಯಕರು ಸಮಾಲೋಚನೆ ನಡೆಸಲಿದ್ದಾರೆ. ಎನ್ಸಿಪಿ 144 ಸ್ಥಾನಗಳಿಗಾಗಿ ಬೇಡಿಕೆ ಇಟ್ಟಿದೆ. ಮಿತ್ರ ಪಕ್ಷ ಕಾಂಗ್ರೆಸ್ 124 ಸ್ಥಾನಗಳನ್ನು ಕೊಡುವುದಾಗಿ ಹೇಳುತ್ತಿದೆ. ಅಂತಿಮವಾಗಿ 130 ಸ್ಥಾನಗಳಿಗೆ ಒಪ್ಪಂದ ಏರ್ಪಡುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮೂಲಗಳು ವಿವರಿಸಿವೆ.
‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎನ್ಸಿಪಿ 114 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. 2009ರ ಲೋಕಸಭೆ ಚುನಾವಣೆಯಲ್ಲಿ ನಮ್ಮ ಸಾಧನೆ ಕಳಪೆಯಾಗಿದ್ದರಿಂದಾಗಿ ಕಡಿಮೆ ಸ್ಥಾನಕ್ಕೆ ಒಪ್ಪಿಕೊಳ್ಳಲಾಗಿತ್ತು. ಆದರೆ, ಈ ಸಲದ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಎನ್ಸಿಪಿ ನಾಲ್ಕು ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ಗೆ ಎರಡು ಸ್ಥಾನ ಸಿಕ್ಕಿದೆ. ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ಹೀಗಾಗಿ 144 ಸ್ಥಾನಗಳನ್ನು ಕೇಳುತ್ತಿದ್ದೇವೆ’ ಎಂದು ಎನ್ಸಿಪಿ ಮೂಲಗಳು ಸ್ಪಷ್ಟಪಡಿಸಿವೆ.
‘ಎನ್ಸಿಪಿ ಮತ್ತು ಕಾಂಗ್ರೆಸ್ ನಡುವೆ ಹೊಂದಾಣಿಕೆ ಏರ್ಪಡಲಿದೆ. ನಮ್ಮದು 14 ವರ್ಷಗಳ ಸಂಬಂಧ. 1999ರಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಚುನಾವಣೆ ಎದುರಿಸಿದ್ದರೂ ಅನಂತರ ಒಗ್ಗೂಡಿ ಸರ್ಕಾರ ಮಾಡಿದ್ದೆವು. ಜಾತ್ಯತೀತ ಶಕ್ತಿಗಳನ್ನು ಬಲಪಡಿಸುವ ಉದ್ದೇಶದಿಂದ ಈ ತೀರ್ಮಾನ ಮಾಡಲಾಗಿತ್ತು. 2004ರಲ್ಲಿ ನಮಗೆ ಕಾಂಗ್ರೆಸ್ಗಿಂತಲೂ ಹೆಚ್ಚು ಸ್ಥಾನ ಸಿಕ್ಕರೂ ಮುಖ್ಯಮಂತ್ರಿ ಸ್ಥಾನ ಅವರಿಗೆ ಬಿಟ್ಟುಕೊಡಲಾಗಿತ್ತು’ ಎಂದು ಎನ್ಸಿಪಿ ನಾಯಕ ಪ್ರಫುಲ್ ಪಟೇಲ್ ನುಡಿದರು. ಮುಂದಿನ ಮುಖ್ಯಮಂತ್ರಿ ಯಾರೆಂದು ಚುನಾವಣೆ ಬಳಿಕ ತೀರ್ಮಾನವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.