‘ಸಣ್ಣ ವಿಚಾರವನ್ನು ದೊಡ್ಡದು ಮಾಡಿ ರಾಜ್ಯ ಮೀಸಲು ಪೊಲೀಸ್ ಪಡೆ ಎಡಿಜಿಪಿ ಡಾ. ಪಿ. ರವೀಂದ್ರನಾಥ್ ಅವರಿಗೆ ಅನ್ಯಾಯ ಎಸಗಲಾಗುತ್ತಿದೆ. ಇಡೀ ಪ್ರಕರಣ ದಲಿತ ಅಧಿಕಾರಿಯೊಬ್ಬರಿಗೆ ಮಾಡಿದ ಅನ್ಯಾಯ’ ಎಂದು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಆಡಿದ ಮಾತು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ರವೀಂದ್ರನಾಥ್ ಮೇಲಿರುವ ಆರೋಪ ಎಂದರೆ ರೆಸ್ಟೊರೆಂಟ್ನಲ್ಲಿ ಕುಳಿತ ಯುವತಿಗೆ ಗೊತ್ತಿಲ್ಲದಂತೆ ಆಕೆಯ ಚಿತ್ರ ತೆಗೆದದ್ದು. ಯಾರೇ ಹೀಗೆ ಮಾಡಿದರೂ ಅದು ಅನುಚಿತ, ಆಕ್ಷೇಪಾರ್ಹ ನಡೆ ಎನಿಸಿಕೊಳ್ಳುತ್ತದೆ.
ರವೀಂದ್ರನಾಥ್ ಸಾಮಾನ್ಯ ವ್ಯಕ್ತಿಯಲ್ಲ; ನಾಗರಿಕರ ಮಾನ, ಪ್ರಾಣ ರಕ್ಷಣೆಯ ಜವಾಬ್ದಾರಿ ಹೊತ್ತ ಇಲಾಖೆಯೊಂದರ ಉನ್ನತಾಧಿಕಾರಿ. ಅಲ್ಲದೆ ಈ ಬಗ್ಗೆ ದೂರು, ಪ್ರತಿ ದೂರು ದಾಖಲಾಗಿದ್ದು, ಸಿಐಡಿ ತನಿಖೆಯೂ ನಡೆಯುತ್ತಿದೆ. ಅದು ಮುಗಿಯುವ ತನಕವೂ ಕಾಯದೆ ಸಚಿವರು ಇಡೀ ಪ್ರಕರಣಕ್ಕೆ ಜಾತಿ ಬಣ್ಣ ಬಳಿಯುತ್ತಿದ್ದಾರೆ. ಆರೋಪಿ ಸ್ಥಾನದಲ್ಲಿ ಇರುವ ಅಧಿಕಾರಿ ಪರ ವಕಾಲತ್ತು ಮಾಡುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ರವೀಂದ್ರನಾಥ್ ವಿರುದ್ಧ ಷಡ್ಯಂತ್ರ ನಡೆಸಿರುವ ಹೈಗ್ರೌಂಡ್್ಸ ಠಾಣೆ ಎಸ್ಐ ರವಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ. ಎಸ್ಐ ರವಿ ಕೂಡ ದಲಿತ ಸಮುದಾಯದವರು ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಅವರೇ ಹೇಳಿದ್ದರು.
ಹಾಗಿದ್ದರೆ ರವಿ ಪರವಾಗಿಯೂ ಶ್ರೀನಿವಾಸ್ ಪ್ರಸಾದ್ ಏಕೆ ಮಾತನಾಡುತ್ತಿಲ್ಲ? ಅವರು ಎಡಿಜಿಪಿಯಂಥ ಪ್ರಭಾವಿ ಅಧಿಕಾರಿ ಅಲ್ಲ; ಬರೀ ಎಸ್ಐ ದರ್ಜೆಯ ಕಿರಿಯ ನೌಕರ ಎನ್ನುವ ಕಾರಣಕ್ಕಾಗಿಯೇ? ಘಟನೆಯಿಂದ ಮಾನಸಿಕ ಯಾತನೆ ಅನುಭವಿಸುತ್ತಿರುವ ಆ ಇಬ್ಬರು ಯುವತಿಯರ ನೋವಿನ ಬಗ್ಗೆ ಮೌನ ವಹಿಸಿರುವುದೇಕೆ? ಸರ್ಕಾರದಲ್ಲಿ ಇರುವವರೇ ಪಕ್ಷಪಾತದಿಂದ ವರ್ತಿಸಿದರೆ ಹೇಗೆ? ಇದೇ ಪ್ರವೃತ್ತಿ ಮುಂದುವರಿದರೆ ಉನ್ನತ ಸ್ಥಾನದಲ್ಲಿರುವವರ ವಿರುದ್ಧ ಸಾಮಾನ್ಯ ಜನ ದೂರು ಕೊಡಲು ಹಿಂಜರಿಯುವ ಸ್ಥಿತಿಯೂ ಬರಬಹುದು ಎನ್ನುವುದು ಸಚಿವರ ಗಮನದಲ್ಲಿ ಇರಬೇಕಾಗಿತ್ತು. ರವೀಂದ್ರನಾಥ್ ವಿರುದ್ಧದ ಷಡ್ಯಂತ್ರ ಏನು ಎನ್ನುವುದನ್ನೂ ಅವರು ಬಹಿರಂಗಪಡಿಸಬೇಕು, ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಾಹಿತಿ ಕೊಟ್ಟು ಸಹಕರಿಸಬೇಕು. ಅದನ್ನು ಬಿಟ್ಟು, ಆರೋಪಿ ಸ್ಥಾನದಲ್ಲಿರುವವರನ್ನು ಬಹಿರಂಗವಾಗಿ ಬೆಂಬಲಿಸಿ ಅದೇ ಉಸಿರಿನಲ್ಲಿಯೇ ‘ನಿಷ್ಪಕ್ಷಪಾತ ತನಿಖೆ ನಡೆಯಬೇಕು’ ಎಂದು ಕೇಳುವುದು ಅರ್ಥಹೀನ ಎನಿಸಿಕೊಳ್ಳುತ್ತದೆ.
ಮಂತ್ರಿ ಸ್ಥಾನದಲ್ಲಿ ಇರುವವರು ಪಕ್ಷಪಾತದಿಂದ ಮಾತನಾಡುವುದನ್ನು ಬಿಟ್ಟಾಗಲೇ ತನಿಖೆ ನಿಷ್ಪಕ್ಷಪಾತವಾಗಿ ಇರಲು ಸಾಧ್ಯ. ಇದನ್ನೆಲ್ಲ ನೋಡಿದರೆ ತಮ್ಮ ಸಂಪುಟದ ಸಚಿವರನ್ನು ನಿಯಂತ್ರಿಸಲು ಮುಖ್ಯಮಂತ್ರಿಗಳಿಗೆ ಆಗುತ್ತಿಲ್ಲ ಎನ್ನುವ ಅನುಮಾನ ಬರುತ್ತದೆ. ದಲಿತರೊಬ್ಬರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಧಾಟಿಯಲ್ಲಿಯೇ ಇಡೀ ಪ್ರಕರಣವನ್ನು ಬಿಂಬಿಸುವ ಪ್ರಯತ್ನ ನಡೆದಿದೆ. ತಾವು ದಲಿತ ಎಂಬ ಕಾರಣಕ್ಕಾಗಿ ತಮ್ಮನ್ನು ತುಳಿಯುತ್ತಿದ್ದಾರೆ, ದಲಿತ ಎಂದು ನಿಂದಿಸುತ್ತಿದ್ದಾರೆ ಎಂಬುದಾಗಿ ರವೀಂದ್ರನಾಥ್ ಹೇಳುತ್ತಿದ್ದಾರೆ. ಮೀಸಲಾತಿ ಎನ್ನುವುದು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುಂದೆ ಬರಲು ದಲಿತರಿಗೆ, ಶೋಷಿತರಿಗೆ ಸಂವಿಧಾನ ನೀಡಿರುವ ಹಕ್ಕು. ಆದರೆ ಕಾನೂನಿನ ಪ್ರಕ್ರಿಯೆಯಲ್ಲಿ ಮಾತ್ರ ಯಾರಿಗೂ ವಿನಾಯಿತಿ ಇಲ್ಲ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು.
ಶಿಸ್ತಿಗೆ ಹೆಸರಾದ ಪೊಲೀಸ್ ಇಲಾಖೆಯ ಉನ್ನತಾಧಿಕಾರಿ ಇಲಾಖೆಯ ಘನತೆ, ಕಟ್ಟುಪಾಡುಗಳಿಗೆ ಒಳಪಟ್ಟೇ ವರ್ತಿಸಬೇಕು. ಟಿ.ವಿ. ಕ್ಯಾಮೆರಾಗಳ ಮುಂದೆ ನಿಂತು ಗೃಹ ಸಚಿವರಿಗೆ ಸಲಹೆ ಕೊಡುವುದು, ತಮ್ಮ ವರ್ಗಾವಣೆ ವಿಚಾರದಲ್ಲಿ ಉನ್ನತ ಸ್ಥಾನದಲ್ಲಿ ಇರುವವರ ಮೇಲೆ ಗೂಬೆ ಕೂರಿಸುವುದು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಬೈಯುವುದು ಅಶಿಸ್ತು ಎನಿಸಿಕೊಳ್ಳುತ್ತದೆ. ಹೀಗೆ ಅಧಿಕಾರಿಗಳೆಲ್ಲ ನ್ಯಾಯ ಪಡೆಯಲು ಕಾನೂನಿನ ದಾರಿ ಬಿಟ್ಟು ಬಹಿರಂಗವಾಗಿ ಮಾತಿನ ಸಮರಕ್ಕೆ ಇಳಿದರೆ ಅರಾಜಕತೆ ಸೃಷ್ಟಿಯಾದೀತು. ಅದಕ್ಕೆಲ್ಲ ಅವಕಾಶ ಕೊಡದೇ ಮುಖ್ಯಮಂತ್ರಿಗಳು ದೃಢ ಕ್ರಮ ಕೈಗೊಳ್ಳಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.