ಚಿಕ್ಕಬಳ್ಳಾಪುರ: ‘ಶಾಲಾ ಆಡಳಿತ ಮಂಡಳಿಯವರು ಇನ್ನು ಮುಂದೆ ಶಿಕ್ಷಕರು, ಸಿಬ್ಬಂದಿ ಜೊತೆ ಮಂಡಳಿ ಪದಾಧಿಕಾರಿಗಳ ವಿಳಾಸ ಮತ್ತು ವಿವರವನ್ನು ಸಮೀಪದ ಪೊಲೀಸ್ ಠಾಣೆಯಲ್ಲಿ ದಾಖಲಿಸಬೇಕು. ಅಪ್ರಾಪ್ತ ವಿದ್ಯಾರ್ಥಿನಿಯರು ಒಂಟಿಯಾಗಿ ಪುರುಷ ಸಿಬ್ಬಂದಿ ಜೊತೆ ಇರದಂತೆ ನೋಡಿಕೊಳ್ಳಬೇಕು. ಪ್ರತಿಯೊಂದು ಶಾಲೆಯು ‘ಮಕ್ಕಳ ಸುರಕ್ಷಾ ಸಮಿತಿ’ ರಚಿಸಬೇಕು.
–ಇದು ಸಾರ್ವಜನಿಕ ಶಿಕ್ಷಣ ಇಲಾಖೆಯು ಎಲ್ಲ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಹೊರಡಿಸಿರುವ ಸುತ್ತೋಲೆಯಲ್ಲಿನ ಪ್ರಮುಖ ಸೂಚನೆಗಳು.
ಈಚೆಗೆ ಹೆಚ್ಚುತ್ತಿರುವ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಪ್ರಕರಣ ತಡೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಸುತ್ತೋಲೆ ಹೊರಡಿಸಿದ್ದು, ‘ಇದು ಅತಿ ಸೂಕ್ಷ್ಮ ವಿಚಾರವಾಗಿದ್ದು, ಪ್ರಥಮ ಆದ್ಯತೆ ಮೇರೆಗೆ ಕಾರ್ಯಪ್ರವೃತ್ತರಾಗಿ’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯು ಸುಮಾರು ಎಂಟು ಪುಟಗಳಷ್ಟು ಸೂಚನೆಗಳನ್ನು ಹೊರಡಿಸಿದ್ದು, ಅದರಲ್ಲಿ ಎಲ್ಲರ ಜವಾಬ್ದಾರಿಯುತ ಹೊಣೆಗಾರಿಕೆ ಬಗ್ಗೆ ತಿಳಿಸಿದೆ.
ಪೊಲೀಸ್ ಇಲಾಖೆಗೆ ಮಾಹಿತಿ: ಬಹುತೇಕ ಎಲ್ಲ ಶಾಲೆಗಳು ಈಗ ಪೊಲೀಸ್ ಇಲಾಖೆ ನಿಗಾ ಮತ್ತು ಸುಪರ್ದಿಯಲ್ಲಿ ನಡೆಯಬೇಕು. ಪ್ರತಿ ಶಾಲೆಯೂ ಸಿಬ್ಬಂದಿ ಬಗ್ಗೆ ಪೊಲೀಸ್ ಠಾಣೆಯಲ್ಲಿ ಮಾಹಿತಿ ದಾಖಲಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆ ನಡೆದರೂ ಪೊಲೀಸ್ ಠಾಣೆ ಗಮನಕ್ಕೆ ತರಬೇಕು.
ಶಾಲೆ ಜೊತೆ ಪೋಷಕರ ಜವಾಬ್ದಾರಿ, ಪೊಲೀಸ್ ಇಲಾಖೆ ಕೈಗೊಳ್ಳಬೇಕಾದ ಕ್ರಮ, ಶಾಲಾ ವಾಹನಗಳ ನಿರ್ವಹಣೆ ಬಗ್ಗೆಯೂ ಸೂಚಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ಶಾಲೆ, ಹಾಸ್ಟೆಲ್, ಪ್ಲೇ ಹೋಮ್, ಮಾಂಟೆಸರಿ ಮಾದರಿ, ಸ್ವಯಂ ಸೇವಾ ಸಂಸ್ಥೆ, ಧಾರ್ಮಿಕ ಮತ್ತು ಧರ್ಮ ಸಂಸ್ಥೆಗಳಲ್ಲಿ ಅನುದಾನಿತ ಸಂಸ್ಥೆಗಳಲ್ಲಿ ‘ಮಕ್ಕಳ ಸುರಕ್ಷತಾ ಯೋಜನೆ’ ಸಿದ್ಧಪಡಿಸುವುದರ ಬಗ್ಗೆಯೂ ಸೂಚನೆಯಲ್ಲಿ ವಿವರಿಸಲಾಗಿದೆ.
ಶಾಲಾ ಆಡಳಿತ ಮಂಡಳಿಯವರು ಹೊರ ಗುತ್ತಿಗೆ ಕೆಲಸ ಹಾಗೂ ಸಾರಿಗೆ ಸುರಕ್ಷತೆ, ಹೌಸ್ ಕೀಪಿಂಗ್ ಮುಂತಾದ ಕೆಲಸಗಳಿಗೆ ವಿಶ್ವಾಸಾರ್ಹ ಏಜ್ಸೆನಿಯಿಂದ ನೇಮಿಸಿಕೊಳ್ಳಬೇಕು.
ಜಾಗೃತಾಧಿಕಾರಿ ನೇಮಕ: ಶಾಲೆಯಿಂದ ಮಕ್ಕಳನ್ನು ಕಳುಹಿಸುವಾಗ ಪೋಷಕರು ಅಥವಾ ಸಂಬಂಧಿಕರ (ಅಧಿಕೃತ ಗುರುತಿನ ಚೀಟಿ ಹೊಂದಿರುವವರು) ಜೊತೆ ಮಾತ್ರ ಕಳುಹಿಸಬೇಕು. ಶಾಲೆಯಲ್ಲಿ ಇಡೀ ದಿನದ ಚಟುವಟಿಕೆಯನ್ನು ಗಮನಿಸಲು ಸಿಬ್ಬಂದಿ ವ್ಯಾಪ್ತಿಯಲ್ಲೇ ಸರದಿ ಪ್ರಕಾರ ಜಾಗೃತಾಧಿಕಾರಿ ನೇಮಿಸಬೇಕು ಎಂದು ಸೂಚಿಸಿದೆ.
ಕಷ್ಟ: ಪಠ್ಯಕ್ರಮ ನಿಗದಿತ ಅವಧಿಯೊಳಗೆ ಪೂರೈಸಲು ಸಾಧ್ಯವಾಗದಿದ್ದರೆ, ಹೆಚ್ಚುವರಿ ಪಾಠಗಳನ್ನು ನಡೆಸಲು ಪೊಲೀಸ್ ಇಲಾಖೆಯಿಂದಲೇ ಅನುಮತಿ ಪಡೆಯಬೇಕಾಗುತ್ತದೆ. ಶಾಲಾ ಅವಧಿ ಹೊರತುಪಡಿಸಿ ಬೇರೆ ಅವಧಿಯಲ್ಲಿ ಹೆಚ್ಚುವರಿ ತರಗತಿ ವೇಳೆ ಏನಾದರೂ ನಡೆದರೆ ಅದಕ್ಕೆ ನಾವೇ ಜವಾಬ್ದಾರರಾಗಬೇಕಿದೆ’ ಎಂದು ಶಿಕ್ಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುವುದೇ ಕಷ್ಟ. ಕಾರ್ಯಕ್ರಮದ ನಂತರ ನಾವೇ ಖುದ್ದಾಗಿ ಅವರನ್ನು ಮನೆಗೆ ಬಿಟ್ಟು ಬರಬೇಕು. ಒಂದು ವೇಳೆ ನಾವು ಒಬ್ಬಂಟಿಯಾಗಿ ವಿದ್ಯಾರ್ಥಿನಿಯನ್ನು ಮನೆಗೆ ಕಳುಹಿಸುವಾಗ ಅವಘಡ ಸಂಭವಿಸಿದರೆ, ಅದಕ್ಕೆ ನಾವೇ ಹೊಣೆ ಹೊರಬೇಕಾಗುತ್ತದೆ. ಮಕ್ಕಳ ಸುರಕ್ಷತೆ ಶಿಕ್ಷಕರ ಹೊಣೆ ಮಾತ್ರವಲ್ಲ ಎಲ್ಲರ ಹೊಣೆ ಎಂಬ ಮನೋಭಾವ ಮೂಡಬೇಕು’ ಎಂದು ಶಿಕ್ಷಕಿಯೊಬ್ಬರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.