ಸುವರ್ಣಸೌಧ (ಬೆಳಗಾವಿ): ಮುಂದಿನ ತಿಂಗಳಲ್ಲಿ 100 ವಸತಿ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ನ ಡಾ.ಕೆ. ಸುಧಾಕರ್ ಅವರ ಪ್ರಶ್ನೆಗೆ ಉತ್ತರಿಸಿ, ‘58 ವಸತಿ ಶಾಲೆಗಳ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣವಾಗಿದೆ’ ಎಂದು ಹೇಳಿದರು.
ಕಾಂಗ್ರೆಸ್ನ ಜೆ.ಟಿ.ಪಾಟೀಲ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿ, ಚುನಾವಣಾ ನೀತಿಸಂಹಿತೆ, ಅಂತರ್ಜಲ ಪ್ರಾಧಿಕಾರದಿಂದ ಅನುಮತಿ ವಿಳಂಬ, ಟೆಂಡರ್ ಪ್ರಕ್ರಿಯೆಯ ತಾಂತ್ರಿಕ, ಆಡಳಿತಾತ್ಮಕ ಕಟ್ಟಳೆಗಳು, ಮಳೆಗಾಲದ ಕಾರಣದಿಂದ ಕೊಳವೆಬಾವಿ ಕೊರೆಸುವ ಪ್ರಕ್ರಿಯೆ ವಿಳಂಬವಾಗಿತ್ತು. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 2013–-14ನೇ ಸಾಲಿನಲ್ಲಿ 5,523, 2014-–15ನೇ ಸಾಲಿನಲ್ಲಿ 9,485 ಕೊಳವೆ ಬಾವಿ ಕೊರೆಸುವುದು ಬಾಕಿ ಇದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 2013–-14ನೇ ಸಾಲಿನಲ್ಲಿ 2,860 ಕೊಳವೆ ಬಾವಿಗಳನ್ನು ಕೊರೆಸಲು ಉದ್ದೇಶಿಸಲಾಗಿತ್ತು. ಇದುವರೆಗೆ 118 ಕೊಳವೆಬಾವಿಗಳನ್ನು ಕೊರೆಸಲಾಗಿದೆ’ ಎಂದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ 2014-–15ನೇ ಸಾಲಿನಲ್ಲಿ ₨ 387.40 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಈ ಪೈಕಿ ಈವರೆಗೆ ವಿಶೇಷ ಅನುದಾನವೂ ಸೇರಿದಂತೆ ನಿಗಮಕ್ಕೆ ₨ 230.24 ಕೋಟಿ ಬಿಡುಗಡೆಯಾಗಿದೆ. ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ 2014–-15ನೇ ಸಾಲಿನಲ್ಲಿ ₨115.93 ಕೋಟಿ ನಿಗದಿಪಡಿಸಲಾಗಿದೆ. ಈ ಪೈಕಿ ಈವರೆಗೆ ₨ 55.50 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.