ಮುಂಬೈ (ಪಿಟಿಐ): ಟೋಲ್ ಸಂಗ್ರಹದ ವಿರುದ್ಧ ಕೊಲ್ಹಾಪುರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮಹಾರಾಷ್ಟ್ರ ವಿಧಾನಸಭೆಯಲ್ಲೂ ಪ್ರತಿ-ಧ್ವನಿಸಿದ್ದು, ಈ ವಿವಾದಕ್ಕೆ ಸಂಬಂಧಿಸಿದಂತೆ ಕಲಾಪಕ್ಕೆ ಅಡ್ಡಿಪಡಿಸಿದಕ್ಕಾಗಿ ಶಿವಸೇನೆಯ ಇಬ್ಬರು ಸದಸ್ಯರನ್ನು ಸದನದಿಂದ ಅಮಾನತು ಮಾಡಲಾಗಿದೆ.
ವಿಧಾನಸಭೆಯಲ್ಲಿ ಬಿಜೆಟ್ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಶಿವಸೇನೆಯ ಶಾಸಕ ಸುಜಿತ್ ಮಿಂಚೆಕರ್ ಮತ್ತು ರಾಜೇಶ ಕ್ಷೀರಸಾಗರ್ ಅವರು ಎದ್ದು ನಿಂತು ಟೋಲ್ ಸಂಗ್ರಹ ಹಿಂದಕ್ಕೆ ಪಡೆಯಬೇಕು ಎಂದು ಘೋಷಣೆ ಕೂಗಲು ಆರಂಭಿಸಿದರು.
ಘೋಷಣೆ ಕೂಗುತ್ತಿದ್ದ ಸದಸ್ಯರು ಸ್ಪೀಕರ್ ಅವರ ಬಳಿ ಬಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿದ್ದರಿಂದ ಸಭಾಧ್ಯಕ್ಷರು ಕಲಾಪವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.