ನವದೆಹಲಿ (ಪಿಟಿಐ): ಕೆಂಪು ಕೋಟೆ ಮೇಲೆ 2000ನೇ ಇಸ್ವಿಯಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದ ಅಪರಾಧಿ ಲಷ್ಕರ್–ಎ–ತೈಯಬಾ (ಎಲ್ಇಟಿ) ಸಂಘಟನೆ ಭಯೋತ್ಪಾದಕ ಮೊಹಮದ್ ಆರಿಫ್ ಅಲಿಯಾಸ್ ಅಶ್ಫಾಕ್ಗೆ ವಿಧಿಸಿದ್ದ ಗಲ್ಲು ಶಿಕ್ಷೆಗೆ ಸುಪ್ರೀಂಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.
ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧಾ ಅವರ ನೇತೃತ್ವದ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
‘13 ವರ್ಷಗಳಿಂದ ನಾನು ಜೈಲಿನಲ್ಲಿ ಇರುವುದರಿಂದ ಇದು ಜೀವಾವಧಿ ಸೆರೆವಾಸಕ್ಕೆ ಸನಿಹದ ಶಿಕ್ಷೆಯೇ ಆಗಿದೆ. ಮತ್ತೆ ಮರಣದಂಡನೆ ಜಾರಿ ಮಾಡಿದರೆ ಅದು ಒಂದೇ ಅಪರಾಧಕ್ಕೆ ಎರಡು ಸಾರಿ ಶಿಕ್ಷೆ ವಿಧಿಸಿದಂತೆ ಆಗುತ್ತದೆ. ಆದ್ದರಿಂದ ಗಲ್ಲು ಶಿಕ್ಷೆ ಜಾರಿ ಮಾಡದಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಕೋರಿ ಅಶ್ಫಾಕ್ ‘ಸುಪ್ರೀಂ’ ಗೆ ಅರ್ಜಿ ಸಲ್ಲಿಸಿದ್ದ.
‘ಮಂದಗತಿಯಲ್ಲಿ ಸಾಗಿದ ನ್ಯಾಯಾಂಗ ಪ್ರಕ್ರಿಯೆ ಮತ್ತು ಗಲ್ಲು ಶಿಕ್ಷೆ ಜಾರಿ ಮಾಡಲು ಸರ್ಕಾರದಿಂದಾದ ವಿಳಂಬದ ಕಾರಣ ಸುದೀರ್ಘ ಕಾಲದಿಂದ ಜೈಲಿನಲ್ಲಿದ್ದೇನೆ. ಇದರಿಂದ ದೈಹಿಕ ಮತ್ತು ಮಾನಸಿಕ ಅನಾರೋಗ್ಯಕ್ಕೆ ತುತ್ತಾಗಿದ್ದೇನೆ’ ಎಂದೂ ಅಶ್ಫಾಕ್ ಅರ್ಜಿಯಲ್ಲಿ ವಿವರಿಸಿದ್ದಾನೆ.
ಹಿನ್ನೆಲೆ: ಕೆಂಪು ಕೋಟೆ ಮೇಲೆ 2000ರದ ಡಿ. 22ರಂದು ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ನ್ಯಾಯಾಲಯ ಅಶ್ಫಾಕ್ಗೆ ಮರಣದಂಡನೆ ವಿಧಿಸಿತ್ತು. ಈ ದಾಳಿಯಲ್ಲಿ ಇಬ್ಬರು ಯೋಧರು ಮತ್ತು ಒಬ್ಬ ನಾಗರಿಕ ಸಾವನ್ನಪ್ಪಿದ್ದರು.
ಸೆಷನ್ಸ್ ಕೋರ್ಟ್ ನೀಡಿದ ತೀರ್ಪನ್ನು ದೆಹಲಿ ಹೈಕೋರ್ಟ್ 2007ರ ಸೆ. 13ರಂದು ದೃಢಪಡಿಸಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಅಶ್ಫಾಕ್ ಸಲ್ಲಿಸಿದ್ದ ಅರ್ಜಿಯನ್ನು 2011ರ ಆ.10ರಂದು ವಜಾ ಮಾಡಿದ್ದ ಸುಪ್ರೀಂ ಕೋರ್ಟ್, ‘ಇದೊಂದು ಸೊಕ್ಕಿನಿಂದ ಕೂಡಿದ ಭಂಡತನದ ಕೃತ್ಯ. ದೇಶದಲ್ಲಿ ಭೀತಿ ಹುಟ್ಟಿಸಲು ಪಾಕಿಸ್ತಾನ ದುಡ್ಡುಕೊಟ್ಟು ನಡೆಸಿದ ಹೇಯ ಕಾರ್ಯ. ಆದ್ದರಿಂದ ಅಪರಾಧಿಗೆ ವಿಧಿಸಿರುವ ಗಲ್ಲು ಶಿಕ್ಷೆ ಸರಿಯಾಗಿಯೇ ಇದೆ’ ಎಂದು ಅಭಿಪ್ರಾಯಪಟ್ಟಿತ್ತು.