ಶಿಡ್ಲಘಟ್ಟ: ಕೆಎಸ್ಆರ್ಟಿಸಿ ನೌಕರರು ವಿವಿಧ ಬೇಡಿಕೆ ಈಡೆರಿಕೆಗೆ ಒತ್ತಾಯಿಸಿ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಅನಾನುಕೂಲ ಆಗದಿರಲೆಂದು ಬಿಜೆಪಿ ತಾಲ್ಲೂಕು ಘಟಕ ಎರಡು ಖಾಸಗಿ ಬಸ್ ನಿಯೋಜಿಸಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿತು.
ರಾಜ್ಯದಾದ್ಯಂತ ಕೆಎಸ್ಆರ್ಟಿಸಿ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಬಂದ್ಗೆ ಕರೆ ನೀಡಿರುವುದರಿಂದ ಸರ್ಕಾರಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.
ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ವಿದ್ಯಾರ್ಥಿಗಳು ಶಾಲೆಗಳತ್ತ ಸುಳಿಯಲಿಲ್ಲ, ಎಂದಿನಂತೆಯೇ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು.
ಸರ್ಕಾರಿ ಬಸ್ ಸೌಲಭ್ಯ ಇಲ್ಲದೆ ಸಾರ್ವಜನಿಕರು ಖಾಸಗಿ ಬಸ್ಗಳಲ್ಲಿ ಪ್ರಯಾಣಿಸಿದರು. ಬಂದ್ ಬಗ್ಗೆ ಮಾಹಿತಿ ಇಲ್ಲದ ಕೆಲ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾದು ಕುಳಿತಿದ್ದರು. ತಾಲ್ಲೂಕಿನ ಗ್ರಾಮೀಣ ಭಾಗಕ್ಕೆ ಹೋಗಿ ಬರಲು ಅನುಕೂಲವಾಗಲೆಂದು ಬಿಜೆಪಿ ಪಕ್ಷದ ವತಿಯಿಂದ ನಿಯೋಜಿಸಿದ್ದ ಬಸ್ ಒಂದಿಷ್ಟು ಜನರಿಗೆ ಅನುಕೂಲವಾಗಿತ್ತು. ಜನ ಮುಗಿಬಿದ್ದು ಪ್ರಯಾಣ ಬೆಳೆಸಿದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಸಿ.ನಂದೀಶ್, ಪ್ರಧಾನ ಕಾರ್ಯದರ್ಶಿ ತರಬಳ್ಳಿ ಭಾಸ್ಕರರೆಡ್ಡಿ, ಪುರುಷೋತ್ತಮ್, ಖಂಡೇರಾವ್, ಮಧು, ಲೋಕೇಶ್, ಮಂಜುಳಮ್ಮ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.