ಸರ್ಕಾರಿ ಸ್ವಾಮ್ಯದ ಪ್ರಮುಖ ಉದ್ದಿಮೆಗಳಾದ ಕೋಲ್ ಇಂಡಿಯಾ (ಸಿಐಎಲ್), ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್ಜಿಸಿ) ಹಾಗೂ ರಾಷ್ಟ್ರೀಯ ಜಲ ವಿದ್ಯುತ್ ನಿಗಮಗಳಲ್ಲಿನ (ಎನ್ಎಚ್ಪಿಸಿ) ತನ್ನ ಪಾಲು ಬಂಡವಾಳ ತಗ್ಗಿಸಲು ಆರ್ಥಿಕ ವ್ಯವಹಾರಗಳ ಕೇಂದ್ರ ಸಚಿವ ಸಂಪುಟ ಸಮಿತಿ ಮಹತ್ವದ ನಿರ್ಧಾರ ಕೈಗೊಂಡಿದೆ. ಗರಿಷ್ಠ ಪ್ರಮಾಣದ ಬಂಡವಾಳ ಸಂಗ್ರಹಿಸುವ ಷೇರು ವಿಕ್ರಯ ನಿರ್ಧಾರ ಇದಾಗಿದೆ.
ಒಟ್ಟಾರೆ ₨ 43 ಸಾವಿರ ಕೋಟಿ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿದೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಷೇರು ವಿಕ್ರಯದ ಮೂಲಕ ₨ 43,425 ಕೋಟಿ ಸಂಗ್ರಹಿಸುವ ಸರ್ಕಾರದ ಬಜೆಟ್ ಗುರಿಗೆ ಪೂರಕವಾಗಿರಲಿದೆ. ಸಂಗ್ರಹವಾಗುವ ಬಂಡವಾಳವನ್ನು ಸರ್ಕಾರ ಯಾವ ಉದ್ದೇಶಕ್ಕೆ ಬಳಸಿಕೊಳ್ಳಲಿದೆ ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ. ಷೇರು ಮಾರಾಟದ ಮೂಲಕ ಬರುವ ಬಂಡವಾಳವನ್ನು ಈ ಕೇಂದ್ರೋದ್ಯಮಗಳ ವಿಸ್ತರಣೆಗೆ, ಸಂಶೋಧನಾ ಅಗತ್ಯಗಳಿಗೆ ಬಳಸಿಕೊಳ್ಳಬೇಕು ಎನ್ನುವುದು ಅಪೇಕ್ಷಣೀಯ. ಆದರೆ, ಅಂತಹ ಉದ್ದೇಶ ಸರ್ಕಾರಕ್ಕೆ ಇರುವಂತೆ ಕಾಣುವುದಿಲ್ಲ. ಈ ವರಮಾನವು ಕೇಂದ್ರ ಸರ್ಕಾರದ ವಿತ್ತೀಯ ಕೊರತೆ ಪ್ರಮಾಣ ತಗ್ಗಿಸಲು ಬಳಕೆಯಾಗುವ ಸಾಧ್ಯತೆಯೇ ಹೆಚ್ಚು.
ಆರ್ಥಿಕ ಸುಧಾರಣಾ ಕ್ರಮಗಳನ್ನು ಅರೆಮನಸ್ಸಿನಿಂದಲೇ ಜಾರಿಗೊಳಿಸಲು ಕ್ರಮ ಕೈಗೊಂಡ ದಿನದಿಂದಲೇ ಅನೇಕ ಕಾರಣಗಳಿಗೆ ಷೇರು ವಿಕ್ರಯದ ಬಗ್ಗೆ ಅಪಸ್ವರ ಕೇಳಿ ಬರುತ್ತಲೇ ಇದೆ. ಸರ್ಕಾರದ ಈ ನಿರ್ಧಾರವನ್ನೂ ಎಡ ಮತ್ತು ಬಲಪಂಥೀಯ ಕಾರ್ಮಿಕ ಸಂಘಟನೆಗಳು ಟೀಕಿಸಿವೆ. ಕೋಲ್ ಇಂಡಿಯಾ ಲಿಮಿಟೆಡ್ನ ಶೇ 10ರಷ್ಟು, ಎನ್ಎಚ್ಪಿಸಿಯ ಶೇ 11.6 ಮತ್ತು ಒಎನ್ಜಿಸಿಯ ಶೇ 5ರಷ್ಟು ಷೇರು ವಿಕ್ರಯದಿಂದ ಈ ಉದ್ದಿಮೆಗಳಲ್ಲಿನ ಸರ್ಕಾರದ ಪಾಲು ಬಂಡವಾಳವು ಕ್ರಮವಾಗಿ ಶೇ 74.60, ಶೇ 79.65 ಮತ್ತು ಶೇ 68.94ಕ್ಕೆ ಇಳಿಯಲಿದೆ. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ಸಾರ್ವಜನಿಕರ ಪಾಲು ಬಂಡವಾಳವು ಶೇ 25ರಷ್ಟು ಇರಬೇಕು ಎನ್ನುವ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ನಿರ್ದೇಶನಕ್ಕೆ ಈ ನಿರ್ಧಾರ ಪೂರಕವಾಗಿಯೇ ಇದೆ. ಆದರೆ, ಸಾರ್ವಜನಿಕರು ಷೇರು ಖರೀದಿಸಲು ಅವಕಾಶ ಇರುವ ಇಂತಹ ಕೊಡುಗೆಗಳಲ್ಲಿ ಜನಸಾಮಾನ್ಯರೂ ಭಾಗಿಯಾದರೆ ಮಾತ್ರ ಸೆಬಿ ಆಶಯ ನಿಜವಾಗಲಿದೆ.
ಕೇಂದ್ರೋದ್ಯಮಗಳ ಷೇರು ಮಾರಾಟ ಕೊಡುಗೆಯ ಸಂದರ್ಭಗಳಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳೇ ಲಾಭ ಬಾಚಿಕೊಳ್ಳುವ ಪ್ರವೃತ್ತಿಗೆ ಸರ್ಕಾರ ಪ್ರಾಮಾಣಿಕವಾಗಿ ಕಡಿವಾಣ ಹಾಕಿದರೆ ಮಾತ್ರ ಸೆಬಿ ಉದ್ದೇಶ ಈಡೇರಲಿದೆ. ಸತತ ಐದು ಹಣಕಾಸು ವರ್ಷಗಳಲ್ಲಿ ಷೇರು ವಿಕ್ರಯದ ಗುರಿ ಈಡೇರಿಸಲು ಸಾಧ್ಯವಾಗಿಲ್ಲ. ಈ ಬಾರಿಯೂ ಇತಿಹಾಸ ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸಿದರೆ ಮಾತ್ರ ಷೇರು ವಿಕ್ರಯದ ನಿಜವಾದ ಉದ್ದೇಶ ಈಡೇರುವುದರ ಜತೆಗೆ, ವಿತ್ತೀಯ ಕೊರತೆಯ ಪ್ರಮಾಣವೂ ಗಮನಾರ್ಹವಾಗಿ ತಗ್ಗೀತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.