ಜನರ ಮೌಢ್ಯವನ್ನು ತೊಡೆದುಹಾಕುವ ಕಾನೂನನ್ನು ಜಾರಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಪ್ರಗತಿಪರರೆಂದು ಬಿಂಬಿಸಿಕೊಂಡ ಕೆಲವು ಸ್ವಾಮಿಗಳ ಗುಂಪೊಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮೂರುದಿನ ಸತ್ಯಾಗ್ರಹ ನಡೆಸಿತು.
ಇದು ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಚಾರ ಪಡೆಯಿತು. ಕಾನೂನನ್ನು ಜಾರಿಗೊಳಿಸಲು ಸರ್ಕಾರಕ್ಕೆ ನೀಡಿದ ಮೂರು ದಿನಗಳ ಗಡುವು ನಡುವೆಯೇ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಮಡೆಸ್ನಾನಕ್ಕೆ ಸುಪ್ರೀಂಕೋರ್ಟ್ ಅವಕಾಶ ಮಾಡಿಕೊಟ್ಟಿದೆ. ಸ್ವಾಮಿಗಳ ಉಪವಾಸ ಇದರ ಮೇಲೆ ಯಾವ ಪರಿಣಾಮ ಬೀರದಿರುವುದು ಚಿಂತನಾರ್ಹ.
ಸ್ವಾಮಿಗಳ ಹೋರಾಟ ಇದೇ ಮೊದಲ ಸಲವಲ್ಲ. ಹಿಂದೆ ನಡೆದ ಹೋರಾಟಗಳು ಯಾವ ಪರಿಣಾಮ ಬೀರದೆ ಶೂನ್ಯವಾಗಿ ಕರಗಿವೆ. ಇದರಿಂದ ಹೋರಾಟದ ಸ್ವಾಮಿಗಳು ಆತ್ಮಾವಲೋಕನ ಮಾಡಿಕೊಳ್ಳುವ ಸದವಕಾಶ ಈಗ ಒದಗಿಬಂದಿದೆ. ಮೊದಲು ತಮ್ಮ ಮಠಗಳನ್ನು ಶುಚಿಗೊಳಿಸಿ ಸರಿಪಡಿಸಬೇಕು. ‘ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆ ನೆಗೆದಂತೆ’ ಸಾಧುವಲ್ಲದ ಚಟುಟಿಕೆಗಳಿಂದ ಮುಕ್ತಗೊಳಿಸಿ, ಅಲ್ಲಿ ಶ್ರದ್ಧಾಭಕ್ತಿ ನೆಲೆಗೊಳಿಸಬೇಕು. ಅಂದಾಗ ಮಾತ್ರ ಸ್ವಾಮಿಗಳ ಪ್ರಭಾವ ಸಮಾಜದ ಮೇಲೆ ಪರಿಣಾಮ ಬೀರಬಲ್ಲದು. ಅದೆಲ್ಲವನ್ನೂ ಬಿಟ್ಟು ಉದ್ಯಾನಗಳಲ್ಲಿ, ಗಾಜಿನ ಮನೆಯಲ್ಲಿ, ಹೈಟೆಕ್ ಭವನಗಳಲ್ಲಿ ಸ್ವಾಮಿಗಳು ಮಾಡುವ ಉಪವಾಸ, ಹೋರಾಟಗಳಿಗೂ ರಾಜಕಾರಣಿಗಳ ಹೋರಾಟಕ್ಕೂ ಯಾವ ವ್ಯತ್ಯಾಸ ಕಾಣುವುದಿಲ್ಲ. ಸ್ವಾಮಿಗಳಿಗೆ ಸಮಾಜದ ಸ್ವಾಸ್ಥ್ಯದ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಅವರು ಉಪವಾಸ, ಧರಣಿಗಳನ್ನು ತೊರೆದು, ಮಠಗಳಿಂದ ಹೊರಬಂದು, ಕ್ರೈಸ್ತ ಮಿಷನರಿಗಳಂತೆ ಮನೆ ಮನೆಗೆ ತೆರಳಿ ತಮ್ಮ ತತ್ವ ಸಂದೇಶದಿಂದ ಜನರ ಮನಸ್ಸನ್ನು ಪರಿವರ್ತಿಸುವ ಸೇವೆಗೆ ತೊಡಗಬೇಕು. ಸ್ವಾಮಿಗಳಿಂದ ಇಂಥ ಮನಪರಿವರ್ತನೆಯ ಸೇವೆ ಬೇಕು.