ನವದೆಹಲಿ: ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಸುತ್ತಮುತ್ತಲಿನ ಉಪ ನಗರಗಳಿಗೆ ‘ಪ್ರತ್ಯೇಕ ರೈಲು ಸೇವೆ’ ಆರಂಭಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ.
ಮೊದಲ ಹಂತದಲ್ಲಿ ಬೆಂಗಳೂರು– ತುಮಕೂರು ಮತ್ತು ಬೆಂಗಳೂರು– ಮಂಡ್ಯ ನಗರಗಳ ನಡುವೆ ಪ್ರತ್ಯೇಕ ರೈಲು ಸೇವೆ ಆರಂಭಿಸುವಂತೆ ರೈಲ್ವೆ ಸಚಿವಾಲಯಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ ಸೊರಕೆ ‘ಪ್ರಜಾವಾಣಿ’ಗೆ ತಿಳಿಸಿದರು.
ಮೊದಲ ಹಂತದಲ್ಲಿ ವಿಶೇಷ ರೈಲುಗಳನ್ನು ಓಡಿಸಲು ಒಂದು ಸಾವಿರ ಕೋಟಿ ವೆಚ್ಚವಾಗಲಿದ್ದು, ಬೆಂಗಳೂರು ನಗರದ ಒತ್ತಡ ಕಡಿಮೆ ಆಗಲಿದೆ. ಸುಮಾರು 25ಲಕ್ಷ ಜನ ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳಿಂದ ಓಡಾಡಲು ಅನುಕೂಲವಾಗಲಿದೆ. ಅವರ ಜೀವನ ನಿರ್ವಹಣೆ ವೆಚ್ವವೂ ಕಡಿಮೆ ಆಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಆಟೋ ಚಾಲಕರು, ತರಕಾರಿ ವ್ಯಾಪಾರಿಗಳು, ಫುಟ್ಪಾತ್ ವ್ಯಾಪಾರಿಗಳ ಬದುಕು ಬೆಂಗಳೂರಿನಲ್ಲಿ ದುಬಾರಿಯಾಗಿದೆ. ಈ ಹೊರೆಯಿಂದ ಅವರನ್ನು ಬಿಡುಗಡೆ ಮಾಡಬೇಕಿದೆ. ಉಪ ನಗರ ರೈಲು ಆರಂಭವಾದರೆ ಅವರವರ ಊರುಗಳಿಂದಲೇ ಕೆಲಸಕ್ಕೆ ಓಡಾಡುತ್ತಾರೆ. ಉಪ ನಗರ ರೈಲು ಸೇವೆಯನ್ನು ಎರಡನೇ ಹಂತದಲ್ಲಿ ಕೋಲಾರ ಮತ್ತಿತರ ನಗರಗಳಿಗೂ ವಿಸ್ತರಿಸಬಹುದು ಎಂದು ಸೊರಕೆ ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರದ ಮನವಿಯನ್ನು ಗಂಭೀರವಾಗಿ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ರೈಲ್ವೆ ಸಚಿವ ಸದಾನಂದಗೌಡರು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಹುಬ್ಬಳ್ಳಿ– ಧಾರವಾಡ ನಗರಗಳಲ್ಲಿ ಅಡೆತಡೆ ಇಲ್ಲದೆ ಬಸ್ಸುಗಳು ಓಡಾಡಲು ಅನುಕೂಲವಾಗುವಂತೆ ‘ಪ್ರತ್ಯೇಕ ಲೇನ್’ (ಬಿಆರ್ಟಿಎಸ್) ನಿರ್ಮಿಸಲಾಗುವುದು. ಈ ಲೇನಿನಲ್ಲಿ ಬಸ್ಸುಗಳನ್ನು ಬಿಟ್ಟು ಬೇರೆ ವಾಹನಗಳು ಓಡಾಡಲು ಅವಕಾಶ ಇರುವುದಿಲ್ಲ. ಮೈಸೂರಿನಲ್ಲಿ ಸೈಕಲ್ ಸವಾರರಿಗೆ ‘ಪ್ರತ್ಯೇಕ ಪಥ’ ಮಾಡುವ ಚಿಂತನೆ ಇದೆ. ಪ್ರಮುಖ ಸ್ಥಳಗಳಲ್ಲಿ ಸೈಕಲ್ ಸ್ಟ್ಯಾಂಡ್ಗಳನ್ನು ಮಾಡಲಾಗುವುದು ಎಂದು ಸೊರಕೆ ಸ್ಪಷ್ಟಪಡಿಸಿದರು.
ನಗರಗಳಲ್ಲಿ ಯದ್ವಾತದ್ವಾ ಬಡಾವಣೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ನಾಗರಿಕ ಸೌಲಭ್ಯಗಳನ್ನು ಕಲ್ಪಿಸಲು ಗಮನ ಕೊಡುತ್ತಿಲ್ಲ. ನಾಗರಿಕ ಉದ್ದೇಶಗಳಿಗೆ ಭೂಮಿ ಒದಗಿಸುವ ಉದ್ದೇಶದಿಂದ ಸರ್ಕಾರವೇ ‘ಲ್ಯಾಂಡ್ ಬ್ಯಾಂಕ್’ ತೆರೆಯುತ್ತಿದೆ. ಚರಂಡಿ ನೀರು ಶುದ್ಧೀಕರಣ ಘಟಕ, ಕುಡಿಯುವ ನೀರು ಶುದ್ಧೀಕರಣ ಘಟಕ, ಉದ್ಯಾನ ವನ, ಶಾಲೆ, ಆಸ್ಪತ್ರೆ, ಪೊಲೀಸ್ ಠಾಣೆಯಂಥ ಸೌಲಭ್ಯಗಳಿಗೆ ಪಟ್ಟಣ ಅಥವಾ ನಗರದೊಳಗೆ ಜಮೀನು ಒದಗಿಸುವುದು ಸರ್ಕಾರದ ಲ್ಯಾಂಡ್ ಬ್ಯಾಂಕ್ ಸ್ಥಾಪನೆ ಉದ್ದೇಶ ಎಂದು ಸಚಿವರು ಹೇಳಿದರು.
ಮುಂದಿನ 30 ವರ್ಷಗಳ ಬೇಡಿಕೆ ಮತ್ತು ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಲ್ಯಾಂಡ್ ಬ್ಯಾಂಕ್ ಮಾಡುತ್ತಿದೆ ಎಂದು ಸೊರಕೆ ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.