ನವದೆಹಲಿ (ಪಿಟಿಐ): ಆಮ್ ಆದ್ಮಿ ಪಕ್ಷವನ್ನು (ಎಎಪಿ) ಕೆಳಹಂತದಿಂದ ರಾಷ್ಟ್ರೀಯ ಮಟ್ಟದವರೆಗೆ ಸಂಪೂರ್ಣ ಪುನರ್ರಚಿಸುವುದಾಗಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಭಾನುವಾರ ಪ್ರಕಟಿಸಿದ್ದಾರೆ.
‘ನಾನೂ ಮನುಷ್ಯ. ತಪ್ಪು ಮಾಡುವುದು ಸಹಜ. ಪಕ್ಷದ ಸದಸ್ಯರಾಗಿ ಯೋಗೇಂದ್ರ ಯಾದವ್ ಅವರಿಗೆ ಆ ತಪ್ಪುಗಳನ್ನು ಎತ್ತಿ ತೋರಿಸುವ ಹಕ್ಕು ಇದೆ’ ಎಂದು ಹೇಳುವ ಮೂಲಕ ಅವರು ಭಿನ್ನಮತೀಯರನ್ನು ಓಲೈಸುವ ಕಸರತ್ತು ಮಾಡಿದ್ದಾರೆ.
ಮೂರು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾರೋಪದಲ್ಲಿ ಪಕ್ಷ ಪುನರ್ ರಚಿಸುವ ನಿರ್ಧಾರವನ್ನು ಕೇಜ್ರಿವಾಲ್್ ಘೋಷಿಸಿದರು. ‘ರಾಜಕೀಯ ವ್ಯವಹಾರ ಸಮಿತಿ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸೇರಿದಂತೆ ಪಕ್ಷದ ಎಲ್ಲ ಸಮಿತಿಗಳನ್ನು ಪುನರ್ರಚಿಸಲಾಗುತ್ತದೆ.
ವಿವಿಧ ವರ್ಗಗಳನ್ನು ಪ್ರತಿನಿಧಿಸುವ ‘‘ಹೊಸ ಜನರನ್ನು’’ ಮುಂದಿನ ಒಂದು ವರ್ಷಗಳಲ್ಲಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತದೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪುನರ್ರಚನೆ ಸಂಬಂಧ ಸಲಹೆ ನೀಡುವುದಕ್ಕಾಗಿ ಪಕ್ಷದ ಕರ್ನಾಟಕ ಘಟಕದ ಸಂಚಾಲಕ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಆರು ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗಿದೆ.
ಪಕ್ಷದಲ್ಲಿ ಆಂತರಿಕ ಸಂಘರ್ಷದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಭಿನ್ನಾಭಿಪ್ರಾಯ ಸಹಜ. ಮುಂದಿನ ದಿನಗಳಲ್ಲಿ ಪಕ್ಷ ಬಲಿಷ್ಠವಾಗಿ ಬೆಳೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯೋಗೇಂದ್ರ ಯಾದವ್ ಜತೆಗಿನ ತಮ್ಮ ಅಸಮಾಧಾನವನ್ನು ಮುಚ್ಚಿಹಾಕಲು ಯತ್ನಿಸಿದ ಅವರು, ‘ಅವರು ನನ್ನ ಅಣ್ಣ. ನನ್ನನ್ನು ಬೈಯುವ ಅಧಿಕಾರ ಅವರಿಗೆ ಇದೆ. ಅವರ ಸಲಹೆಗಳನ್ನು ನಾನು ಗಂಭೀರವಾಗಿ ಪರಿಗಣಿಸುತ್ತೇನೆ’ ಎಂದರು.