ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಚೆಸ್ವಿಗೆ ಕೇಂದ್ರ ಅಕಾಡೆಮಿ ಪ್ರಶಸ್ತಿ

Last Updated 24 ಆಗಸ್ಟ್ 2013, 7:37 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಸಕ್ತ (2013) ಸಾಲಿನ `ಬಾಲ ಸಾಹಿತ್ಯ ಪುರಸ್ಕಾರ' ಪ್ರಶಸ್ತಿಗೆ ಕವಿ ಡಾ.ಎಚ್. ಎಸ್. ವೆಂಕಟೇಶಮೂರ್ತಿ ಮತ್ತು `ಯುವ ಪುರಸ್ಕಾರ' ಪ್ರಶಸ್ತಿಗೆ ಕವಿ ಲಕ್ಕೂರು ಆನಂದ ಆಯ್ಕೆಯಾಗಿದ್ದಾರೆ.

ವೆಂಕಟೇಶಮೂರ್ತಿ ಮಕ್ಕಳ ಸಾಹಿತ್ಯಕ್ಕೆ ನೀಡಿರುವ ಸಮಗ್ರ ಕೊಡುಗೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಯುವ ಪ್ರಶಸಿ 35 ವರ್ಷದೊಳಗಿನ ಸಾಹಿತಿಗಳಿಗೆ ನೀಡಲಾಗುತ್ತದೆ. ಲಕ್ಕೂರು ಆನಂದ ಅವರ `ಬಟವಾಡೆಯಾಗದ ರಸೀತಿ'  ಕವನ ಸಂಕಲನಕ್ಕೆ ಯುವ ಪುರಸ್ಕಾರ ದೊರೆತಿದೆ. ಎರಡೂ ಪ್ರಶಸ್ತಿಗಳು ತಲಾ ರೂ 50 ಸಾವಿರ ನಗದು, ಸ್ಮರಣಿಕೆ ಒಳಗೊಂಡಿವೆ.

ಪ್ರಶಸ್ತಿ ಪುರಸ್ಕೃತರ ಪ್ರತಿಕ್ರಿಯೆ

`ನಿರೀಕ್ಷೆ ಇರಲಿಲ್ಲ'
ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಎಚ್.ಎಸ್.ವೆಂಕಟೇಶಮೂರ್ತಿ ಅವರು ಮೂಲತಃ ಚನ್ನಗಿರಿ ತಾಲ್ಲೂಕಿನ ಹೋದಿಗೆರೆ ಗ್ರಾಮದವರು. ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದಾರೆ. ನಾಲ್ಕು ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಕುರಿತು `ಪ್ರಜಾವಾಣಿ'ಗೆ ಪ್ರತಿಕ್ರಿಯೆ ನೀಡಿದ ವೆಂಕಟೇಶಮೂರ್ತಿ ಅವರು, `1970ರಿಂದಲೂ ನಾನು ಮಕ್ಕಳ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಮಕ್ಕಳ ಕವಿತೆ, ಕತೆ ಮತ್ತು ನಾಟಕಗಳನ್ನು ಬರೆದಿದ್ದೇನೆ. ಮಕ್ಕಳಿಗಾಗಿಯೇ ಸುಮಾರು 15 ಕೃತಿಗಳನ್ನು ಪ್ರಕಟಿಸಿದ್ದೇನೆ. ಮಕ್ಕಳ ಸಿನಿಮಾ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದೆ. ಈ ಬಾರಿ ನಾನು ಈ ಪುರಸ್ಕಾರವನ್ನು ನಿರೀಕ್ಷಿಸಿರಲಿಲ್ಲ. 40 ವರ್ಷಗಳ ಎಲ್ಲಾ ಕೆಲಸವನ್ನೂ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಈ ಅವಧಿಯಲ್ಲಿ ನಾನು ಮಾಡಿದ ಎಲ್ಲಾ ಕೆಲಸಗಳು ಹನಿಗೂಡಿ ಹಳ್ಳ ಆದಂತೆ ಪ್ರಶಸ್ತಿ ತಂದುಕೊಟ್ಟಿವೆ' ಎಂದರು.

`ಜವಾಬ್ದಾರಿ ಹೆಚ್ಚಿಸಿದೆ'
ಲಕ್ಕೂರು ಆನಂದ ಅವರು ಕೆಂಗೇರಿಯ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಈವರೆಗೆ ನಾಲ್ಕು ಕವನ ಸಂಕಲನಗಳು, ನಾಲ್ಕು ಅನುವಾದಿತ ಕೃತಿಗಳು ಮತ್ತು ಒಂದು ಸಂಶೋಧನಾ ಕೃತಿಯನ್ನು ಪ್ರಕಟಿಸಿದ್ದಾರೆ.

ಪ್ರಶಸ್ತಿ ಕುರಿತು ಪ್ರತಿಕ್ರಿಯಿಸಿದ ಲಕ್ಕೂರು ಆನಂದ ಅವರು, `ರಾಜ್ಯದ ಎಲ್ಲಾ ದಮನಿತ ಸಮುದಾಯಗಳಿಗೆ ಈ ಪ್ರಶಸ್ತಿಯನ್ನು ಅರ್ಪಿಸಲು ಬಯಸುತ್ತೇನೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT