ವಿಜಯಪುರ: ಮೂರು ವರ್ಷಗಳಲ್ಲಿ ಎತ್ತಿನ ಹೊಳೆ ಯೋಜನೆ ಮೂಲಕ ನೀರು ಬರುತ್ತದೆ ಎಂದು ಹೇಳಿಕೆ ನೀಡಿರುವ ಸಂಸದ ವೀರಪ್ಪ ಮೊಯಿಲಿ ಬಯಲು ಸೀಮೆಯ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಶಾಸಕ ಪಿಳ್ಳಮುನಿಶಾಮಪ್ಪ ಹೇಳಿದ್ದಾರೆ.
ರಾಜ್ಯ ಸರ್ಕಾರ ಎತ್ತಿನಹೊಳೆ ಯೋಜನೆಗಾಗಿ ₨13ಸಾವಿರ ಕೋಟಿಗಳನ್ನು ಮೀಸಲಿಟ್ಟಿದೆ. ಆದರೆ, ವರ್ಷಕ್ಕೆ ಒಂದು ಸಾವಿರ ಕೋಟಿಯಂತೆ ಹಣ ಬಿಡುಗಡೆಗೊಳಿಸುತ್ತಿದೆ. ಹೀಗೆ ಆದಲ್ಲಿ ಯೋಜನೆ ಪೂರ್ಣಗೊಳ್ಳಲು ಸರಿಸುಮಾರು 15–20ವರ್ಷ ಕಾಲಾವಧಿ ಬೇಕಾಗುತ್ತದೆ. ಅಷ್ಟರವರೆಗೂ ಬಯಲು ಸೀಮೆಯ ಜನ ನೀರಿಗಾಗಿ ಏನು ಮಾಡುವುದು ಎಂದು ಅವರು ಪ್ರಶ್ನಿಸಿದರು.
ಕಳೆದ ವರ್ಷ ಬಯಲು ಸೀಮೆಯ ಶಾಸಕರು ಎತ್ತಿನಹೊಳೆ ಕಾಮಗಾರಿ ಪರಿಶೀಲನೆ ನಡೆಸಲು ತೆರಳಿದ್ದ ವೇಳೆ ಕೇವಲ 6 ಕಿ.ಮಿ ಮಾತ್ರ ಪೈಪ್ಲೈನ್ ಅಳವಡಿಸಲಾಗಿತ್ತು, ಕಾಮಗಾರಿ ಸಂಪೂರ್ಣ ಆಮೆ ಗತಿಯಲ್ಲಿ ಸಾಗುತ್ತಿದೆ, ಆದರೆ, ಸಂಸದ ವೀರಪ್ಪ ಮೊಯಿಲಿ ಅವರು, ಮೂರು ವರ್ಷಗಳಲ್ಲಿ ಎತ್ತಿನ ಹೊಳೆ ಮೂಲಕ ನೀರು ಬರುತ್ತದೆ ಎಂದು ನೀಡಿರುವ ಹೇಳಿಕೆ ಕಣ್ಣೊರೆಸುವ ತಂತ್ರವಷ್ಟೆ ಎಂದು ಅವರು ಹೇಳಿದರು.
ಈಗಾಗಲೇ ಉತ್ತರ ಕರ್ನಾಟಕದ ರೈತರು ಕಳಸಾ–ಬಂಡೋರಿ ಯೋಜನೆಗಾಗಿ ತೀವ್ರ ಹೋರಾಟ ನಡೆಸುತ್ತಿದ್ದು, ಈ ಭಾಗದ ರೈತರೂ ಕೂಡ ಅದೇ ಹಾದಿ ಹಿಡಿಯಬೇಕಾಗಿದೆ. ಕೇವಲ ರಾಜಕೀಯ ಲಾಭಕ್ಕಾಗಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿರುವ ವೀರಪ್ಪ ಮೊಯಿಲಿ ಅವರು ಜನರ ಹೋರಾಟದ ಬಿಸಿಯನ್ನು ಎದುರಿಸಬೇಕಾಗುತ್ತದೆ ಎಂದರು.
ದೇವನಹಳ್ಳಿ ತಾಲ್ಲೂಕಲ್ಲಿ ಬರ ಆವರಿಸಿದ್ದು, ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸರಬರಾಜಿಗಾಗಿ ತಾಲ್ಲೂಕು ಮಟ್ಟದ ಅಧಿಕಾರಗಳೊಂದಿಗೆ ಚರ್ಚೆ ನಡೆಸಲಾಗಿದೆ. ಮೇವು ಬ್ಯಾಂಕ್ ತೆರೆಯುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಬರಪರಿಹಾರವಾಗಿ ₨1 ಕೋಟಿ ಹಣ ಬಿಡುಗಡೆಯಾಗಿದ್ದು, ಕೃಷಿ ಅಧಿಕಾರಿಗಳು ರೈತರ ಪಟ್ಟಿ ತಯಾರಿಸಿ ರೈತರ ಖಾತೆಗೆ ನೇರವಾಗಿ ಹಣ ಪಾವತಿಯಾಗುವಂತೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ರೈತರು ಬೆಳೆ ನಷ್ಟ, ಸಾಲ ಮುಂತಾದ ವಿಷಯಗಳಿಗೆ ಧೃತಿಗೆಡಬಾರದು, ರೈತರ ಹಿತ ಕಾಪಾಡಲು ಸರ್ಕಾರ ಅವಶ್ಯಕ ಕ್ರಮಕೈಗೊಳ್ಳುತ್ತಿದೆ. ಪ್ರತಿ ಬುಧವಾರ ದೇವನಹಳ್ಳಿ ತಾಲ್ಲೂಕು ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸುತ್ತಿದ್ದು, ರೈತರು ನೇರವಾಗಿ ನನ್ನನ್ನು ಭೇಟಿಯಾಗಿ ಸಮಸ್ಯೆಗಳನ್ನು ನೇರವಾಗಿ ಹಂಚಿಕೊಳ್ಳಬಹುದು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.