ಈ ಬಾರಿಯ ಅಕ್ಟೋಬರ್ ೨ರ ಗಾಂಧಿ ಜಯಂತಿಯಂದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಕಸಪೊರಕೆ ಹಿಡಿದು ಕಸ ಗುಡಿಸಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದರು. ಹಾಗೆಯೇ ಮೋದಿಯವರ ಈ ಸ್ವಚ್ಛತಾ ಸೂತ್ರ ಅನುಸರಿಸಿದ ಬಹುತೇಕ
ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರು, ಒಟ್ಟಾರೆ ಎಲ್ಲ ಜಾತಿಗಳ ಜನರು ಅಂದು ದೇಶದಾದ್ಯಂತ ಕಸ ಗುಡಿಸುವ ಮೂಲಕ ಸ್ವಚ್ಛತೆಯ ಈ ಕೈಂಕರ್ಯಕ್ಕೆ ತಮ್ಮ ಕೈಜೋಡಿಸಿದರು.
ದುರಂತವೆಂದರೆ ಅದರ ಮಾರನೇ ದಿನ, ‘ಬೇರೆ’ ಯಾರೂ ಕಸ ಗುಡಿಸಿದ ಸದ್ದು ಕೇಳಿಸಲಿಲ್ಲ! ಯಥಾಪ್ರಕಾರ ಪೌರ ಕಾರ್ಮಿಕರು ತಲೆತಗ್ಗಿಸಿ ದೂಳು ಕುಡಿಯುತ್ತಾ ಕೈಗೆ ಗವಸು ಇಲ್ಲದೆ ಸೂಕ್ತ ರಕ್ಷಣಾತ್ಮಕ ದಿರಿಸು ಇಲ್ಲದೆ ನಗರದ ಗಲೀಜು ಎತ್ತುತ್ತಿದ್ದರು! ಅಂದಹಾಗೆ ಆ ಪೌರಕಾರ್ಮಿಕರಲ್ಲಿ ಬಹುತೇಕರು ದಲಿತರು ಎಂಬುದು ಇಲ್ಲಿ ಗಮನಾರ್ಹ.
ಪ್ರಧಾನಿ ಅವರ ‘ಸ್ವಚ್ಛ ಭಾರತ ಅಭಿಯಾನ’ ₨ 2 ಲಕ್ಷ ಕೋಟಿ ವೆಚ್ಚದ ಮಹತ್ವಾಕಾಂಕ್ಷಿ ಯೋಜನೆ. ದೇಶದ ಸಾವಿರಾರು ಪಟ್ಟಣಗಳ, ಗ್ರಾಮಗಳ ಕಸ ಎತ್ತುವ ಯೋಜನೆಗೆ ಬರಿ ದಲಿತ ಪೌರಕಾರ್ಮಿಕರ ದುಡಿತ ಮಾತ್ರ ಯಾಕೆ ಸೀಮಿತವಾಗಬೇಕು? ಸ್ವತಃ ಮೋದಿಯವರು ಹೇಳಿದಂತೆ ಮಹಾತ್ಮ ಗಾಂಧಿಯವರ ಕನಸು ನನಸು ಮಾಡುವ, ಈ ಯೋಜನೆಗೆ ದೇಶದ ಉಳಿದ ಜಾತಿ–-ಜನಾಂಗಗಳೂ ಕೈಜೋಡಿಸುವುದು ಬೇಡವೇ? ದೇಶದ ಇತರೆ ಜನರು, ಸಾಮಾನ್ಯರು ದೇಶ ಶುಚಿಗೊಳಿಸುವ ಇಂತಹ ಪವಿತ್ರ ಕಾರ್ಯದಲ್ಲಿ ಪಾಲ್ಗೊಳ್ಳುವುದು ಬೇಡವೇ? ಜಾತಿ ಆಧಾರಿತ ಉದ್ಯೋಗದ ಭಾರತದ ಇಂತಹ ವ್ಯವಸ್ಥೆಯಲ್ಲಿ ಸಹಸ್ರಾರು ವರ್ಷಗಳಿಂದ ಕಸ ಗುಡಿಸಿ ಕಸ ಗುಡಿಸಿ ದಲಿತರು ಸಾಕು ಸಾಕಾಗಿ ಹೋಗಿದ್ದಾರೆ. ಪ್ರಶ್ನೆಯೇನೆಂದರೆ ೨೧ನೇ ಶತಮಾನದ ಈ ಆಧುನಿಕ ಯುಗದಲ್ಲೂ ಸ್ವಚ್ಛತೆಯ ಕೆಲಸವನ್ನು ದಲಿತರಿಗೆ ಮಾತ್ರ ಏಕೆ ಮೀಸಲಿರಿಸಲಾಗಿದೆ?
ಈ ದಿಸೆಯಲ್ಲಿ ಕಾಲ ಈಗಲೂ ಮಿಂಚಿಲ್ಲ. ಮುಂದಿನ ಐದು ವರ್ಷಗಳವರೆಗೆ ಸರ್ಕಾರ ಸ್ವಚ್ಛ ಭಾರತದ ತನ್ನ ಆ ಕನಸಿನ ಯೋಜನೆಯನ್ನು ಸಾಕಾರಗೊಳಿಸಲು ಬರಿ ದಲಿತ ಪೌರಕಾರ್ಮಿಕರನ್ನು ಅವಲಂಬಿಸುವುದರ ಬದಲಿಗೆ ಎಲ್ಲ ಜಾತಿ-, ಜನಾಂಗದವರನ್ನು ಅವರವರ ಜನಸಂಖ್ಯೆ ಆಧಾರದ ಮೇಲೆ ಸೂಕ್ತ ವೇತನ, ಸವಲತ್ತುಗಳನ್ನು ನೀಡುವ ಮೂಲಕ ನೇಮಿಸಿಕೊಳ್ಳಲಿ. ಆ ಮೂಲಕ ಮಹಾತ್ಮರ ನೂರೈವತ್ತನೇ ಜನ್ಮದಿನದ ಅಪರೂಪದ ಸಂದರ್ಭದಲ್ಲಾದರೂ ಸ್ವಚ್ಛಭಾರತ ಅಭಿಯಾನ ಜಾತಿ ನಿರ್ಮೂಲನೆಯ ಅಸ್ತ್ರವಾಗಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.