ರಾಮದುರ್ಗ (ಬೆಳಗಾವಿ): ಸ್ಥಳೀಯ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಬ್ಇನ್ಸ್ಪೆಕ್ಟರ್ ಬಸವರಾಜ ಕೊಳ್ಳಿ ಅವರ ಮನೆಗೆ ಕಳ್ಳರು ನುಗ್ಗಿ 50 ಗ್ರಾಂ ಚಿನ್ನಾಭರಣ, ₹ 45 ಸಾವಿರ ನಗದು ಕಳವು ಮಾಡಿದ್ದಾರೆ. ಇದರ ಜತೆಗೆ, ಇಲಾಖೆಗೆ ಸೇರಿದ ರಿವಾಲ್ವರ್, ಐದು ಗುಂಡುಗಳನ್ನು ಕದ್ದೊಯ್ದಿದ್ದಾರೆ.
ಇದೇ 22ರಂದು ಸವದತ್ತಿಯ ಯಲ್ಲಮ್ಮನ ಗುಡ್ಡದಲ್ಲಿ ನಡೆದ ಜಾತ್ರೆ ಬಂದೋಬಸ್ತ್ಗೆ ಕೊಳ್ಳಿ ಅವರನ್ನು ನಿಯೋಜಿಸಲಾಗಿತ್ತು. ಅವರ ಕುಟುಂಬ ಸದಸ್ಯರು ಮನೆಗೆ ಬೀಗ ಹಾಕಿ ಬಾದಾಮಿ ಬನಶಂಕರಿ ಜಾತ್ರೆಗೆ ತೆರಳಿದ್ದರು. ಮನೆಯವರು ಮಂಗಳವಾರ ರಾತ್ರಿ ಮರಳಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.
ಬಂದೋಬಸ್ತ್ಗೆ ಹೋಗುವಾಗ ಇಲಾಖೆ ಕೊಟ್ಟಿದ್ದ ರಿವಾಲ್ವರನ್ನು ಒಯ್ಯದೆ ಮನೆಯಲ್ಲಿಟ್ಟು ನಿರ್ಲಕ್ಷ್ಯ ತೋರಿರುವ ಕಾರಣ ಎಸ್ಐಯನ್ನು ಅಮಾನತು ಮಾಡಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಆರ್. ರವಿಕಾಂತೇಗೌಡ ಅವರು ಸುದ್ದಿಗಾರರಿಗೆ ತಿಳಿಸಿದರು. ಇಂಥದ್ದೇ ಪ್ರಕರಣ 15 ವರ್ಷಗಳ ಹಿಂದೆಯೂ ಪಟ್ಟಣದಲ್ಲಿ ನಡೆದಿತ್ತು.