ಪೌರೋಹಿತ್ಯ ವೃತ್ತಿಗೆ ಸಂಬಂಧಿಸಿದ ವಿಷಯಗಳನ್ನೇ ಪಠ್ಯಕ್ರಮವನ್ನಾಗಿಸಿ, ರಾಜ್ಯದಲ್ಲಿ ವೈದಿಕ ಪರಂಪರೆಗೆ ಪುಷ್ಟಿ ನೀಡಲೆಂದೇ ಪ್ರಾರಂಭವಾದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿ ದಲಿತ ಮತ್ತು ಸಮಾಜಮುಖಿ, ವೈಚಾರಿಕ ಮತ್ತು ಮಾನವೀಯ ಮೌಲ್ಯಗಳಿಗೆ ಸಂಪೂರ್ಣ ವಿರಾಮ ನೀಡಿದವರು ಪ್ರೊ.ಜಿ. ಮಲ್ಲೇಪುರಂ ವೆಂಕಟೇಶ್.
ಅವರು ಈ ಹುದ್ದೆಯಿಂದ ನಿವೃತ್ತಿಯಾದ ನಂತರ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾನವೀಯ ವಿಚಾರಗಳ ಬಗ್ಗೆ (ಪ್ರ.ವಾ.ಸೆ.೧೫) ಮಾತನಾಡಿದ್ದಾರೆ. ಯಾವ ನೈತಿಕ ಬಲದಿಂದ ಮಾತನಾಡಿದ್ದಾರೆಂಬುದು ನನಗೆ ತಿಳಿಯುತ್ತಿಲ್ಲ. ತಮ್ಮ ಭಾಷಣದಲ್ಲಿ ದೃಶ್ಯ ಮಾಧ್ಯಮದಲ್ಲಿನ ಕ್ರೌರ್ಯ ಮತ್ತು ಹಿಂಸಾತ್ಮಕ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾಪಿಸಿರುವ ಅವರು, ಜ್ಯೋತಿಷ, ವಾಸ್ತು, ಮಾಟ-ಮಂತ್ರ, ಯಂತ್ರ-ತಂತ್ರ, ಹೋಮ-ಹವನ, ರಾಹು ಕಾಲ, ಗುಳಿಕ ಕಾಲ, ಜಾತಕ ಫಲ ಇನ್ನೂ ಮುಂತಾದ ಕಾರ್ಯಕ್ರಮಗಳು ಅದೇ ಮಾಧ್ಯಮಗಳಲ್ಲಿ ವಿಜೃಂಭಿಸುತ್ತಿದ್ದರೂ ಇವುಗಳ ಬಗ್ಗೆ ಚಕಾರವೆತ್ತದಿರುವುದೂ ಆಶ್ಚರ್ಯ ಎನ್ನಿಸುತ್ತದೆ!
ಕರ್ನಾಟಕ ದಲಿತ ಪ್ರಾಧಿಕಾರವನ್ನು ಸರ್ಕಾರ ಘೋಷಿಸಬೇಕೆಂದು ಸಮ್ಮೇಳನಾಧ್ಯಕ್ಷರಾಗಿ ಅವರು ಫರ್ಮಾನು ಸಹ ಹೊರಡಿಸಿದ್ದಾರೆ. ಒಂದು ವೇಳೆ ಅಂಥಾ ಪ್ರಾಧಿಕಾರ ಏನಾದರೂ ಪ್ರಾರಂಭಗೊಂಡರೆ, ಅದರ ಪ್ರಥಮ ಅಧ್ಯಕ್ಷರಾಗಿಯೂ ಅವರೇ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದರೂ ಆಶ್ಚರ್ಯವಿಲ್ಲ!