ಬೆಂಗಳೂರು: ನಗರದ ಚಾಮರಾಜಪೇಟೆಯ ಟಿಪ್ಪು ಸುಲ್ತಾನ್ ಅರಮನೆಯಿಂದ ಸದಾಶಿವನಗರದ ಅರಮನೆ ಮೈದಾನದವರೆಗೆ ಹಲವು ಪಾರಂಪರಿಕ ಕಟ್ಟಡಗಳನ್ನು ಗುರುತಿಸಿರುವ ನಗರದ ವಾಸ್ತುತಜ್ಞರೊಬ್ಬರು, ಈ ಪ್ರದೇಶವನ್ನು ‘ಪಾರಂಪರಿಕ ವಲಯ’ ಎಂದು ಘೋಷಿಸಲು ಸಲಹೆ ನೀಡಿದ್ದಾರೆ.
ಈ ವಲಯದಲ್ಲಿ ಸಂಚಾರದಟ್ಟಣೆ ಹೆಚ್ಚಾಗಿದ್ದು, ದಾರಿಹೋಕರಿಗೆ ಯಾವುದೇ ಪಾರಂಪರಿಕ ಕಟ್ಟಡವನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಪುರಾತನ ಕಟ್ಟಡಗಳನ್ನು ಜನ ಗಮನವಿಟ್ಟು ನೋಡಿದ್ದಾದರೆ ಮತ್ತೆ ಮತ್ತೆ ವೀಕ್ಷಿಸಬೇಕೆನ್ನುವ ಅಭಿಲಾಷೆಯನ್ನು ಅವುಗಳು ಹುಟ್ಟುಹಾಕುತ್ತವೆ ಎನ್ನುತ್ತಾರೆ ವಾಸ್ತುತಜ್ಞ ನರೇಶ್ ನರಸಿಂಹನ್.
‘ಅರಮನೆಯಿಂದ ಅರಮನೆವರೆಗೆ’ ಹೆಸರಿನಲ್ಲಿ ನರೇಶ್ ಅವರು ಈ ಸಮೀಕ್ಷೆಯನ್ನು ನಡೆಸಿದ್ದಾರೆ. ‘ಒಂದೊಂದು ತಾಣವೂ ನೂರು ವರ್ಷಕ್ಕೂ ಅಧಿಕ ಇತಿಹಾಸ ಹೊಂದಿದೆ’ ಎಂದು ಅವರು ಹೇಳುತ್ತಾರೆ. ನಿಜವಾಗಿ ಹೇಳುವು ದಾದರೆ ಟಿಪ್ಪು ಅರಮನೆಗಿಂತ ತುಸುಹಿಂದೆ ಈ ವಲಯ ಶುರುವಾಗುತ್ತದೆ. ಒಡೆಯರ್ ಅವರ ಅರಮನೆಯಿರುವ ಮೈದಾನದವರೆಗೂ ಅದು ವಿಸ್ತಾರ ಹೊಂದಿದೆ’ ಎಂದು ವಿವರಿಸುತ್ತಾರೆ.
‘ಸ್ವರ್ಣ ಮಾರ್ಗದಲ್ಲಿರುವ ಈ ಕಟ್ಟಡಗಳನ್ನು ವೀಕ್ಷಿಸುತ್ತಾ ಬಂದರೆ ಬೆಂಗಳೂರು ಹೇಗೆ ಬೆಳೆಯುತ್ತಾ ಬಂತು ಎನ್ನುವುದೂ ಗೊತ್ತಾಗುತ್ತದೆ’ ಎಂದು ಹೇಳುತ್ತಾರೆ ನರೇಶ್.
ನಗರದ ಹಳೆಯ ಪ್ರದೇಶಗಳ ಕುರಿತು ವಿವರಿಸಿ, ‘ಅವೆನ್ಯೂ ರಸ್ತೆಯೂ ಪಾರಂಪರಿಕ ಮೌಲ್ಯ ಹೊಂದಿದ್ದು, ಅಲ್ಲಿನ ಕಟ್ಟಡಗಳನ್ನು ಜತನದಿಂದ ಕಾಪಾಡಿಕೊಳ್ಳುವ ಅಗತ್ಯವಿದೆ. ಪಾದಚಾರಿಗಳಿಗೆ ಮೀಸಲಾಗಿರುವ ಈ ಬೀದಿ ಸ್ವರೂಪವನ್ನು ಯಥಾರೀತಿಯಲ್ಲಿ ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ’ ಎನ್ನುತ್ತಾರೆ.
‘ಮುಂಬೈ, ಹೈದರಾಬಾದ್ ಮತ್ತು ಬಾರ್ಸಿಲೋನಾದಂತಹ ನಗರಗಳಲ್ಲಿ ಪಾರಂಪರಿಕ ವಲಯವನ್ನು ಪ್ರತ್ಯೇಕವಾಗಿ ಗುರುತಿಸಲಾಗಿದೆ. ಅವುಗಳ ರಕ್ಷಣೆಗೆ ಅಲ್ಲಿನ ಸರ್ಕಾರಗಳು ವಿಶೇಷ ಆದ್ಯತೆ ನೀಡುತ್ತವೆ. ಇಲ್ಲಿಯೂ ಅಂತಹ ಪ್ರಯತ್ನದ ಅಗತ್ಯವಿದೆ’ ಎಂದು ಹೇಳುತ್ತಾರೆ.
ಮಾಣಿಕ್ಯವೇಲು ಮ್ಯಾನ್ಶನ್ ಮತ್ತು ಸ್ವಾತಂತ್ರ್ಯ ಉದ್ಯಾನವನ್ನು ಸಾರ್ವಜನಿಕರ ಉಪಯೋಗಕ್ಕೆ ತೆರೆದಿಟ್ಟದ್ದನ್ನು ಸ್ವಾಗತಿಸಿರುವ ಅವರು, ಪಾರಂಪರಿಕ ಕಟ್ಟಡಗಳ ರಕ್ಷಣೆಗಾಗಿ ಜನರಲ್ಲಿ ಜಾಗೃತಿ ಉಂಟು ಮಾಡಬೇಕು ಎನ್ನುವ ಸಲಹೆ ನೀಡುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.