ನವದೆಹಲಿ: ರಾಜಕೀಯವಾಗಿ ಪ್ರಬಲವಾಗುತ್ತಿರುವ ಬಿಜೆಪಿ ವಿರುದ್ಧ ಪ್ರತಿಭಟಿಸಲು ಸೋಮವಾರ ಒಂದೇ ವೇದಿಕೆಗೆ ಬಂದ ಜನತಾ ಪರಿವಾರದ ನಾಯಕರು ಭಿನ್ನಾಭಿಪ್ರಾಯ ಮರೆತು ಒಗ್ಗೂಡುವ ಶಪಥ ಮಾಡಿದರು. ಹಳೆಯದನ್ನು ಮರೆತು ಹೊಸ ಅಧ್ಯಾಯ ಆರಂಭಿಸಲು ಜನತಾ ಪರಿವಾರದ ನಾಯಕರು ತೀರ್ಮಾನಿಸಿದರು.
ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್, ಆರ್ಜೆಡಿ ಮುಖಂಡ ಲಾಲು ಪ್ರಸಾದ್, ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮತ್ತಿತರರು ಎನ್ಡಿಎ ಮೈತ್ರಿಕೂಟವನ್ನು ಅಧಿಕಾರದಿಂದ ಕಿತ್ತೊಗೆಯಲು ನಿರ್ಧರಿಸಿದರು.
ಪ್ರಧಾನಿ ನರೇಂದ್ರ ಮೋದಿ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಚುನಾವಣೆ ವೇಳೆ ಕೊಟ್ಟಿರುವ ಭರವಸೆಗಳನ್ನು ಈಡೇರಿಸಲು ವಿಫಲರಾಗಿದ್ದಾರೆ. ಕಪ್ಪು ಹಣ ತರುವುದಾಗಿ ನೀಡಿದ್ದ ವಾಗ್ದಾನ ಮರೆತಿದ್ದಾರೆ ಎಂದು ನಾಯಕರು ಟೀಕಿಸಿದರು. ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪು ಹಣ ತಂದರೆ ಪ್ರತಿಯೊಬ್ಬರ ಖಾತೆಗೂ ₨15 ಲಕ್ಷ ಜಮಾ ಮಾಡಬಹುದು ಎಂದು ನೀಡಿದ್ದ ಭರವಸೆ ಏನಾಯಿತು ಎಂದು ಅವರು ಪ್ರಶ್ನಿಸಿದರು.
ಎನ್ಸಿಪಿ ಮುಖಂಡರಾದ ತಾರೀಖ್ ಅನ್ವರ್, ಡಿ.ಪಿ. ತ್ರಿಪಾಠಿ, ಇಂಡಿಯನ್ ನ್ಯಾಷನಲ್ ಲೋಕದಳದ ದುಶ್ಯಂತ್ ಚೌತಾಲಾ ಮೊದಲಾದವರು ಭಾಗವಹಿಸಿದ್ದ ಜನತಾ ಪರಿವಾರದ ಧರಣಿಯಲ್ಲಿ, ಹಿಂದೆ ಮೂರು ಸಲ ಕೇಂದ್ರದಲ್ಲಿ ಸರ್ಕಾರ ಮಾಡಿದ ಸಂದರ್ಭವನ್ನು ಮೆಲುಕು ಹಾಕಲಾಯಿತು. ಮೋದಿ ಅವರಿಗೆ ಸಿಕ್ಕಿರುವುದು ಕೇವಲ ಶೇ 31ರಷ್ಟು ಮತಗಳು. ಜನರಿಗೆ ಕೊಟ್ಟಿರುವ ಆಶ್ವಾಸನೆಗಳನ್ನು ಈಡೇರಿಸದಿದ್ದರೆ ಮನೆಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜನತಾ ಪರಿವಾರ ಮತ್ತೆ ಒಗ್ಗೂಡುತ್ತಿದೆ. ನಾವೆಲ್ಲರೂ ಒಗ್ಗೂಡುವ ನಿಶ್ಚಯ ಮಾಡಿದ್ದೇವೆ. ಮುಲಾಯಂ ಸಿಂಗ್ ವಿಲೀನದ ವಿಧಿ ವಿಧಾನ ರೂಪಿಸುತ್ತಿದ್ದಾರೆ. ಉಳಿದ ಪಕ್ಷಗಳನ್ನು ಒಳಗೊಂಡು ಆಡಳಿತ ಪಕ್ಷಕ್ಕೆ ವಿರುದ್ಧವಾಗಿ ಪ್ರಬಲ ವಿರೋಧ ಪಕ್ಷ ಕಟ್ಟಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮೋದಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಆರ್ಜೆಡಿ ಮುಖಂಡ ಲಾಲು ಪ್ರಸಾದ್, ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ನಿರಂತರವಾಗಿ ‘ದಾಳಿ’ ಮಾಡುತ್ತಿದೆ ಎಂದು ದೂರಿದರು. ನಿತೀಶ್ ಕುಮಾರ್ ಅವರ ಜತೆ ತಾವು ಭಿನ್ನಾಭಿಪ್ರಾಯ ಹೊಂದಿರುವುದಾಗಿ ಎಲ್ಲರೂ ಹೇಳುತ್ತಿದ್ದಾರೆ. ಆದರೆ, ನಾವಿಬ್ಬರೂ ಜತೆಗೂಡಿದ್ದೇವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.