ಹೈದರಾಬಾದ್ (ಪಿಟಿಐ): ‘ಚಾಲಕ ಒಳದಾರಿಯಲ್ಲಿ ಬಸ್ ಓಡಿಸಿಕೊಂಡು ಬರದಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.
‘ಯಾವಾಗಲೂ ಬಸ್ ಓಡಿಸುತ್ತಿದ್ದ ಚಾಲಕ ಗುರುವಾರ ಕರ್ತವ್ಯಕ್ಕೆ ಬಂದಿರಲಿಲ್ಲ. ಆತನ ಬದಲಿಗೆ ಬಿಕ್ಷಾಪತಿ ಗೌಡ್ ಎನ್ನುವ ಮತ್ತೊಬ್ಬ ಚಾಲಕ ಬಸ್ ಓಡಿಸುತ್ತಿದ್ದ. ಮಾಸಾಯಿಪೇಟ ಗ್ರಾಮದಲ್ಲಿ ಎರಡು ಕಾವಲು ರೈಲ್ವೆ ಕ್ರಾಸಿಂಗ್ ಇವೆ. ಆದರೆ ಇಲ್ಲಿಂದ ಶಾಲೆಗೆ ಹೋದರೆ ತುಸು ದೂರ ಹೆಚ್ಚಾಗುತ್ತದೆ. ಆದ್ದರಿಂದ ಚಾಲಕ, ಕಾವಲುರಹಿತ ಕ್ರಾಸಿಂಗ್ ಮಾರ್ಗ ಆಯ್ದುಕೊಂಡ. ಹಳಿಯಲ್ಲಿ ವೇಗದ ರೈಲು ಬರುತ್ತಿರುವುದನ್ನು ಆತ ಗಮನಿಸಿಲ್ಲ. ಇವೆಲ್ಲವೂ ದುರಂತಕ್ಕೆ ಕಾರಣವಾಯಿತು’ ಎಂದು ತೆಲಂಗಾಣ ಜಿಆರ್ಪಿ ಐಜಿ ಕೃಪಾನಂದ ತ್ರಿಪಾಠಿ ಯಜೇಲಾ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ನಾಂದೇಡ್– ಸಿಕಂದರಾಬಾದ್ ರೈಲು, ವೇಳಾಪಟ್ಟಿಗಿಂತ ನಾಲ್ಕು ತಾಸು ತಡವಾಗಿ ಬಂದಿದ್ದರಿಂದ ಈ ಬಗ್ಗೆ ಚಾಲಕನಿಗೆ ತಿಳಿಯದೇ ಇರಬಹುದು ಎನ್ನಲಾಗಿದೆ.
ಕಲ್ಲುತೂರಾಟ: ಘಟನಾ ಸ್ಥಳಕ್ಕೆ ಧಾವಿಸಿ ಬಂದ ಗ್ರಾಮಸ್ಥರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.