ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೇ 18ರಂದು ನಡೆದ ಅಕಾಡೆಮಿಯ ನೂತನ ಸದಸ್ಯರ ಪ್ರಥಮ ಸಭೆಯಲ್ಲಿ ಈ ಆಯ್ಕೆ ನಡೆದಿದೆ.
`ಈ ಸ್ಥಾನವನ್ನು ಯಾವತ್ತೂ ಬಯಸಿರಲಿಲ್ಲ. ಆದರೆ, ಪಾಲಿಗೆ ಬಂದಿರುವ ಜವಾಬ್ದಾರಿಯನ್ನು ಸಂತೋಷದಿಂದ ಒಪ್ಪಿಕೊಂಡಿದ್ದೇನೆ' ಎಂದು ಈ ಕುರಿತು ಕಂಬಾರರು `ಪ್ರಜಾವಾಣಿ'ಗೆ ಪ್ರತಿಕ್ರಿಯೆ ನೀಡಿದರು.
`ವಿ.ಕೃ. ಗೋಕಾಕ, ಡಾ.ಯು. ಆರ್. ಅನಂತಮೂರ್ತಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಕಾಡೆಮಿಯ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಕನ್ನಡ ಸಾಹಿತಿಗಳ ಪೈಕಿ ಕಂಬಾರರು ಮೂರನೆಯವರು' ಎಂದು ಅಕಾಡೆಮಿ ಕಾರ್ಯಕಾರಿ ಮಂಡಳಿಯ ನಿಕಟಪೂರ್ವ ಸದಸ್ಯ ಸಿದ್ಧಲಿಂಗ ಪಟ್ಟಣಶೆಟ್ಟಿ ತಿಳಿಸಿದರು.
`ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಈ ಬಾರಿ ಅವಿರೋಧ ಆಯ್ಕೆ ನಡೆದಿದೆ' ಎಂದರು.
ಡಾ. ವಿಶ್ವನಾಥ ಪ್ರಸಾದ್ ತಿವಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಅವಧಿ 5 ವರ್ಷ.