ಕಡೂರು: ಕಟಾವಿಗೆ ಬಂದಿದ್ದ 4 ಎಕರೆ ಕಬ್ಬು ಬೆಳೆ ಆಕಸ್ಮಿಕವಾಗಿ ಬೆಂಕಿಗೆ ಸಂಪೂರ್ಣ ಭಸ್ಮವಾದ ಘಟನೆ ತಾಲ್ಲೂಕಿನ ಬಿಳುವಾಲ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಮಧ್ಯಾಹ್ನ 2 ಗಂಟೆಗೆ ಬಿಳುವಾಲದ ಕೃಷ್ಣಮೂರ್ತಿ ಅವರಿಗೆ ಸೇರಿದ 7 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಗದ್ದೆಗೆ ಬೆಂಕಿ ತಗುಲಿದ್ದು, ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದರು.
ಆ ವೇಳೆಗೆ ಬಂದ ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ಹತೋಟಿಗೆ ತಂದಿದ್ದು, ಅಷ್ಟು ಹೊತ್ತಿಗಾಗಲೇ ಸುಮಾರು 4 ಎಕರೆ ಕಬ್ಬು ಬೆಂಕಿಗೆ ಅಹುತಿಯಾಗಿದೆ.
ಸ್ಥಳಕ್ಕೆ ಕಂದಾಯಾಧಿಕಾರಿ ಸತ್ಯನಾರಾಯಣ್ ಮತ್ತು ಕಸಬಾ ಕೃಷಿ ಅಧಿಕಾರಿ ಲೋಕನಾಥ್ ಭೇಟಿ ನೀಡಿ ಪರಿಶೀಲಿಸಿದರು.
‘ಎರಡು ದಿನದಲ್ಲಿ ಕಬ್ಬು ಕಟಾವು ಮಾಡಲು ಸಿದ್ಧತೆ ನಡೆಸಿದ್ದ ಸಮಯದಲ್ಲಿ ಕಬ್ಬು ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ನಮ್ಮ ದುರದೃಷ್ಟ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದಿದ್ದೆ.
ಈಗ ಏನು ಮಾಡುವುದು ಎಂದು ದಿಕ್ಕು ತೋಚದಂತಾಗಿದೆ. ₨4 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಕಬ್ಬು ಬೆಂಕಿಗೆ ಅಹುತಿಯಾಗಿದೆ’ ಕೃಷಿಕ ಕೃಷ್ಣಮೂರ್ತಿ ಅಳಲು ತೋಡಿಕೊಂಡರು.