ಹೈದರಾಬಾದ್ (ಪಿಟಿಐ): ಇಲ್ಲಿನ ಅಂತರರಾಷ್ಟ್ರೀಯ ಅರೆ ಶುಷ್ಕ ವಲಯದ ಬೆಳೆ ಸಂಶೋಧನಾ ಸಂಸ್ಥೆ (ಐಸಿಆರ್ಐಎಸ್ಎಟಿ) ಉಪ ಮಹಾನಿರ್ದೇಶಕರಾಗಿರುವ ಕನ್ನಡಿಗ ಕೃಷಿವಿಜ್ಞಾನಿ ಡಾ. ಸಿ.ಎಲ್. ಲಕ್ಷ್ಮೀಪತಿ ಗೌಡ ಅವರಿಗೆ ಪ್ರಸಕ್ತ ಸಾಲಿನ ಜಪಾನ್ನ ಪ್ರತಿಷ್ಠಿತ ಸ್ಯಾನೊ ಟೌಜ್ಬುರೊ ವಿಶೇಷ ಪ್ರಶಸ್ತಿ ಲಭಿಸಿದೆ.
ಕೃಷಿ ಸಂಶೋಧನೆಗಾಗಿ ಜಪಾನ್ನ ನಿಗಾತಾ ಅಂತರರಾಷ್ಟ್ರೀಯ ಆಹಾರ ಪ್ರಶಸ್ತಿ ಪ್ರತಿಷ್ಠಾನ ಈ ಪ್ರಶಸ್ತಿ ನೀಡಿದೆ.
ಅಂತರರಾಷ್ಟ್ರೀಯ ಅರೆ ಶುಷ್ಕ ವಲಯದ ಬೆಳೆ ಸಂಶೋಧನಾ ಸಂಸ್ಥೆ ಯಲ್ಲಿ ಲಕ್ಷ್ಮೀಪತಿ ಗೌಡ ಅವರು 40 ವರ್ಷಗಳಿಂದ ಕೃಷಿ ಸಂಶೋಧನೆಯಲ್ಲಿ ತೊಡಗಿದ್ದಾರೆ.
ಏಷ್ಯಾ ಹಾಗೂ ಆಫ್ರಿಕಾದ ಒಣ ಪ್ರದೇಶಗಳ ಸಣ್ಣ ಹಿಡುವಳಿದಾರರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಗೌಡ ಅವರು ನೀಡಿದ ಕೊಡುಗೆ ಹಾಗೂ ಕೈಗೊಂಡ ಸಂಶೋಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಪ್ರತಿಷ್ಠಾನ ತಿಳಿಸಿದೆ. ಜಪಾನ್ ನಿಗಾತಾ ಟಕಿ ಮೆಸ್ಸೆ ಅಂತರರಾಷ್ಟ್ರೀಯ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘ಈ ಪ್ರಶಸ್ತಿ ದೊರೆತಿರುವುದು ನಿಜಕ್ಕೂ ನನಗೆ ಸಂತೋಷವಾಗಿದೆ. ನಾಲ್ಕು ದಶಕಗಳ ನನ್ನ ಸೇವೆಗೆ ದೊರೆತ ಪ್ರತಿಫಲ ಇದು’ ಎಂದು ಪ್ರತಿಕ್ರಿಯಿಸಿದ್ದಾರೆ.
ಏಷ್ಯಾದ ಪ್ರತಿಷ್ಠಿತ ಪುರಸ್ಕಾರಗಳಲ್ಲಿ ಒಂದಾಗಿರುವ ನಿಗಾತಾ ಅಂತರರಾಷ್ಟ್ರೀಯ ಆಹಾರ ಪ್ರಶಸ್ತಿಯನ್ನು ವಿಶ್ವ ಆಹಾರ ಪ್ರಶಸ್ತಿಗೆ ಸರಿ ಸಮನಾದ ಪುರಸ್ಕಾರ ಎಂದೇ ಪರಿಗಣಿಸಲಾಗಿದೆ. ಅಧಿಕ ಇಳುವರಿ ನೀಡುವ ರೋಗ ಹಾಗೂ ಕೀಟ ನಿರೋಧಕ ಕಾಬೂಲಿ ಹಾಗೂ ದೇಶಿ ಕಡಲೆ ತಳಿಯನ್ನು ಅಭಿವೃದ್ಧಿಪಡಿಸಿದ ಶ್ರೇಯ ಗೌಡ ಅವರಿಗೆ ಸಲ್ಲುತ್ತದೆ.