ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನ: ‘ಅಧ್ಯಕ್ಷೀಯ’ ಮುಜುಗರ

Last Updated 30 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಹಿರಿಯ ದಲಿತ ಸಾಹಿತಿಯೊಬ್ಬರನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳ­ನದ ಪಟ್ಟಕ್ಕೇರಿಸುವ ಪ್ರಾಮಾಣಿಕ ಆಸೆಯನ್ನು ಕಳೆ­ದೊಂದು ವರ್ಷದಿಂದ ಬಹಿರಂಗ­ವಾಗಿ ಪ್ರಕಟಪಡಿಸುತ್ತಲೇ ಬಂದಿದ್ದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರ ಜಾತಕದಲ್ಲಿ ಏನೋ ದೋಷ­ವಿದ್ದಂತಿದೆ. 8೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳ ನಿಗದಿ ಗೊಂದಲದಿಂದ ಹಾಗೂ ಹೀಗೂ ಪಾರಾಗಿದ್ದ ಅವರನ್ನು ಮತ್ತೊಂದು ಸಮಸ್ಯೆ ಸುತ್ತಿ­ಕೊಳ್ಳ­ತೊಡಗಿದೆ.

ಇದೀಗ ಶಿಕ್ಷಣ­ದಲ್ಲಿ ಕನ್ನಡ ಮಾಧ್ಯಮದ ನಿರ್ಲಕ್ಷ್ಯದ ಕಾರಣ ನೀಡಿ, ದೇವ­ನೂರ ಮಹಾದೇವ ಅವರು ಸಮ್ಮೇಳನದ ಅಧ್ಯಕ್ಷ ಪಟ್ಟವನ್ನು ನಿರಾಕರಿಸುವ ಮೂಲಕ  ತೀರಾ  ಮುಜುಗರದ ಸಮಸ್ಯೆ­ಯೊಂದನ್ನು ಹಾಲಂಬಿಯವರ ಹೆಗಲಿ­ಗೇರಿಸಿದ್ದಾರೆ. 
ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಬಗೆಗಿನ ಇದೇ ನಿಲುವನ್ನು ಕಳೆದ ಹಲವು ವರ್ಷಗಳಿಂದ ಪ್ರತಿಪಾದಿಸುತ್ತಲೇ ಬಂದಿರುವ ಮಹಾದೇವ ಅವರ ನಿರಾಕರಣೆಯ ಹಿಂದಿರುವ ಪ್ರಾಮಾಣಿಕ ಕಾಳಜಿಯ ಬಗ್ಗೆ ಕನ್ನಡಿಗರಾರಿಗೂ ಅನುಮಾನವಿಲ್ಲ. ಅಂತೆಯೇ, ದಲಿತ ಎಂಬ ಒಂದೇ ಕಾರಣಕ್ಕೆ ಅಧ್ಯಕ್ಷತೆ ವಹಿಸಲು ಆಹ್ವಾನಿಸಿದ್ದರೆ, ಅದನ್ನು ತಿರಸ್ಕರಿಸುವ ಅವರ  ವೈಯಕ್ತಿಕ ನಿಲು­ವನ್ನು  ತಪ್ಪೆಂದು ಹೇಳುವ ಅಧಿಕಾರವೂ ಬೇರೆಯವರಿಗಿಲ್ಲ.

ಈಗ ಹಾಲಂಬಿಯವರ ಮುಂದಿನ ನಡೆ ಏನು? ಹಿರಿಯ ದಲಿತ ಸಾಹಿತಿಯೊಬ್ಬರನ್ನು ಸಾಹಿತ್ಯ ಸಮ್ಮೇಳನದ ಪಟ್ಟಕ್ಕೇರಿಸುವ ತಮ್ಮ ಆಸೆಯನ್ನು ಪೂರೈಸುವ ಇರಾದೆಯಿಂದ ಮತ್ತೊಬ್ಬ ದಲಿತ ಸಾಹಿತಿಯನ್ನು ಆಹ್ವಾನಿಸು­ತ್ತಾರಾ? ಅಥವಾ ಸಾವಿರಾರು ವರ್ಷಗಳ ಅಕ್ಷರ ಪರಂಪರೆಯಂತೆ, ದಲಿತರನ್ನು ದೂರ­ವಿ­ಡುವ ಸಂಪ್ರದಾಯವನ್ನು ಅನಿವಾರ್ಯವಾಗಿ ಮುಂದು­ವ­ರಿ­ಸುತ್ತಾರಾ? ಹಾಗೆ ಆಗಿಹೋದರೆ, ‘ಸಾಮಾಜಿಕ ನ್ಯಾಯ’ದ ಅನ್ವಯ ದಲಿತರಿಗೆ ಸಿಗುತ್ತಿದ್ದ ಒಂದು ಅಪರೂಪದ ಅವಕಾಶ­ವನ್ನು ತಪ್ಪಿಸಿದ ಆರೋಪ ದೇವನೂರರನ್ನು ಕಾಡುವುದಿಲ್ಲವೇ?

ಎಲ್ಲಕ್ಕಿಂತ ಮುಖ್ಯವಾಗಿ, ಕನ್ನಡದ ಬಗೆಗಿನ ಕಾಳಜಿಯಿಂದ ಮಹಾದೇವ ತಿರಸ್ಕರಿಸಿದ ಬಳಿಕ ನೀಡಲಾಗುವ    ‘ಪ್ಲಾನ್ ಬಿ’ ಆಹ್ವಾನ­ವನ್ನು, ಈ ಪಟ್ಟಕ್ಕೆ ಹೊಸದಾಗಿ ಆಹ್ವಾನ­ಗೊಳ್ಳುವ ದಲಿತ, ದಲಿತೇತರ ಸಾಹಿತಿ ಯಾರೇ ಆಗಿರಲಿ, ತಮಗೆ ಮಾಡಲಾಗು­ತ್ತಿ­ರುವ ಅವಮಾನವೆಂದು ಭಾವಿಸುವುದಿ­ಲ್ಲವೇ? ಅಲ್ಲದೆ, ‘ತಾನೊಬ್ಬ ಕನ್ನಡ ಮಾಧ್ಯಮ ವಿರೋ­ಧಿಯೆಂಬುದನ್ನು ಸಾರ್ವಜನಿಕವಾಗಿ ಒಪ್ಪಿ­ಕೊಂಡಂತೆ ಆಗುತ್ತದೆ’ ಎಂದು ಭಾವಿಸಿ­ದರೇ?

ಆದ್ದರಿಂದ, ಸದ್ಯ ಎದುರಾಗಿರುವ ಅಧ್ಯ­ಕ್ಷೀಯ ಆಹ್ವಾನದ ‘ಮುಜುಗರ’ದಿಂದ ಕನ್ನಡ ಸಾಹಿತಿಗಳನ್ನು ಮತ್ತು ಮುಖ್ಯವಾಗಿ ಸಾಹಿತ್ಯ ಪರಿಷತ್ತನ್ನು ಪಾರುಮಾಡುವ ಶಕ್ತಿ ಈಗ ಉಳಿದಿರುವುದು ದೇವನೂರ ಅವರ ಕೈಯಲ್ಲಿ ಮಾತ್ರ.
ಆದ್ದರಿಂದ ನಮ್ಮೆಲ್ಲರ ಪ್ರೀತಿಯ  ದೇವನೂರ ಮಹಾದೇವ, ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷತೆಯ ಆಹ್ವಾನವನ್ನು ತಮ್ಮೆಲ್ಲಾ ಪ್ರತಿಭಟನೆಗಳೊಂದಿಗೇ ದಯವಿಟ್ಟು ಸ್ವೀಕರಿಸಬೇಕು.

ತಮ್ಮ ಅಧಿಕೃತ ಅಧ್ಯಕ್ಷೀಯ ಭಾಷಣದಲ್ಲಿ ಅವರು ಉಳಿದೆಲ್ಲ ಸಾಹಿತ್ಯ ಮತ್ತು ಸಾಹಿತ್ಯೇತರ ಸಂಗತಿಗಳನ್ನೆಲ್ಲ ನಿರ್ಲಕ್ಷಿಸಿ, ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಸಮಸ್ಯೆಯನ್ನಷ್ಟೇ ನಿಷ್ಠುರವಾಗಿ ದಾಖಲಿಸುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಎಲ್ಲ ಸಾಧ್ಯತೆಗಳನ್ನೂ ಬಳಸಿಕೊಳ್ಳಬೇಕು. ಪ್ರತಿಭಟ­ನೆಯ ಸಂಕೇತವಾಗಿ ಸಮ್ಮೇಳನದುದ್ದಕ್ಕೂ ಮಹಾದೇವ ಅವರು ಕಪ್ಪುಪಟ್ಟಿ ಧರಿಸಿಕೊಂಡೇ ಭಾಗವಹಿಸಬೇಕು. ಅವರ ಪ್ರೇರಣೆ­ಯಿಂದ ಸಮ್ಮೇಳನದಲ್ಲಿ ಭಾಗವಹಿಸಲಿರುವ ಬಹುಪಾಲು ಮಂದಿ ಇದೇ ರೀತಿ ಕಪ್ಪುಪಟ್ಟಿ ಧರಿಸಲು ಸಾಧ್ಯವಿದೆ. ಹೀಗಾ­ದಾಗ ಅವರ ಆಶಯಕ್ಕೆ ಸಾರ್ವಜನಿಕ ಸಮ್ಮ­ತಿಯೂ ಸಿಕ್ಕಂತಾ­ಗುತ್ತದೆ.
ಬೊಳುವಾರು, ಬೆಂಗಳೂರು

ದಿಟ್ಟನಡೆ
ಕನ್ನಡ ಸಾಹಿತ್ಯ ಪರಿಷತ್ತು, ಶ್ರವಣ­ಬೆಳ­ಗೊಳ­ದಲ್ಲಿ ಆಯೋಜಿಸಿರುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ದೇವ­ನೂರ ಮಹಾ­ದೇವ ಅವರು ತಿರಸ್ಕರಿಸಿರುವುದು ಸರಿಯಾಗಿಯೇ ಇದೆ. ಹಿಂದೆ ಕೂಡ ಅವರು ಪ್ರಶಸ್ತಿ, ಸನ್ಮಾನ, ಧನ,­ ಕನಕ­ಗ­ಳನ್ನು ನಿರಾಕರಿಸಿ ಕನ್ನಡ ಭಾಷೆ ಕುರಿತು ತಮ್ಮ ಬದ್ಧತೆಯನ್ನು ಮೆರೆ­ದಿದ್ದಾರೆ. ಮಾತೃಭಾಷೆ ಕುರಿತ ಸುಪ್ರೀಂಕೋರ್ಟ್‌ ತೀರ್ಪು ಹಾಗೂ ಹಿಂದಿನಿಂದಲೂ ಭಾಷೆ ಕುರಿತು ಸರ್ಕಾರದ ಅಸಡ್ಡೆ, ಜನರಲ್ಲಿ ಯಾರಿಗೂ ಕನ್ನಡ ಬೇಕಿಲ್ಲ ಎಂಬ ಭಾವನೆ ಮೂಡಿ­ಸಿದ್ದರೆ  ಆಶ್ಚರ್ಯವಿಲ್ಲ.

೨೦೧೪, ಕನ್ನಡವನ್ನೂ ಸೇರಿದಂತೆ  ಭಾರತದ ಎಲ್ಲಾ ದೇಶಿ ಭಾಷೆಗಳ ಪಾಲಿಗೆ ಕರಾಳ ವರ್ಷ. ಸರ್ಕಾರದ ನಿಷ್ಕ್ರಿಯ ಧೋರಣೆಗೆ ಪ್ರತಿಯಾಗಿ ಕಸಾಪ ಇದೊಂದು ವರ್ಷ ಸಮ್ಮೇಳನ ನಡೆಸದಿದ್ದರೂ ಆದೀತು. ಹಿಂದಿನ ಸಮ್ಮೇಳನಗಳ ಹಲವಾರು ಠರಾವುಗಳು ಸರ್ಕಾರಿ ಕಚೇರಿಗಳಲ್ಲಿ  ದೂಳು ತಿನ್ನುತ್ತಾ ಬಿದ್ದಿವೆ. ಭಾಷೆ ಉಳಿವಿಗಾಗಿ ಈಗ ಗೋಕಾಕ ಮಾದರಿ ಚಳವಳಿ ಬೇಕಿದೆ ಅನಿಸುತ್ತದೆ. ಇಂಥದೊಂದು ಚಳ­ವಳಿ ಮುನ್ನ­ಡೆಸಲು ಡಾ.ರಾಜ್‌ಕುಮಾರ್‌ ಅವರಂತಹ ಜನ­ಮನ್ನಣೆ ಪಡೆದ ನಾಯಕರೂ ಇಲ್ಲ. ಸರ್ಕಾರದ ಮೌನದ ನಡೆ ಕೂಡ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡು­ತ್ತಿದೆ. ಕನ್ನಡ ಭಾಷೆ ಮತ್ತು ಕನ್ನಡ ಶಾಲೆಗಳು ಈಗ ತೀವ್ರ ಆತಂಕಕ್ಕೆ ಒಳಗಾಗಿವೆ. ಆದ್ದರಿಂದ ಕನ್ನಡ ಭಾಷೆಯ ಉಳಿವಿ­ಗಾಗಿ ದೇವನೂರರಂಥ ಒಬ್ಬ ಲೇಖಕ ಸತತವಾಗಿ ತೋರುತ್ತಿ­ರುವ ಕನ್ನಡ ಪರ ಗಟ್ಟಿ ಬದ್ಧತೆಯನ್ನು ಕಸಾಪದಂತಹ ಸಂಸ್ಥೆಯೂ ಈ ಸಂದರ್ಭದಲ್ಲಿ ತೋರಬೇಕು.
ವೆಂಕಟೇಶ ಮಾಚಕನೂರ, ಧಾರವಾಡ

ಮತ್ತೆ ಯೋಚಿಸಲಿ...
ಸಾಹಿತಿ ದೇವನೂರ  ಮಹಾದೇವ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲು  ನಿರಾಕರಿಸಿರುವುದು ಸರಿ­ಯಲ್ಲ. ಸಮ್ಮೇಳನದಲ್ಲಿ ನಾಡಿನ ಎಲ್ಲಾ ಸಾಹಿತಿಗಳು, ವಿಚಾರವಂತರು, ಚಿಂತಕರು, ಸಂಶೋಧಕರು, ಸಹೃದ­ಯಿಗಳು, ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು, ನಾಡು–­ನುಡಿಯ ಬಗ್ಗೆ ಕಳಕಳಿ ಇರುವವರು ಭಾಗವಹಿಸು­ತ್ತಾರೆ. ಸಮಸ್ತ ಕನ್ನಡದ ಎಲ್ಲಾ ಮನಸ್ಸುಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ದೇವನೂರರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿ ನಾಡು–ನುಡಿಯ ಜಾಗೃತಿಗೆ ಎಚ್ಚರಿಸಿ ಮುಂದಿನ ಹೋರಾಟದ ಬಗ್ಗೆ ತಿಳಿಸಲು ಅವಕಾಶ ಇರುತ್ತದೆ.

ಇಂತಹ ಅವಕಾಶವನ್ನು ದೇವನೂರ ಮಹಾದೇವ ಅವರು ಕಳೆದುಕೊಳ್ಳಬಾರದು. ತಮ್ಮ ನಿರ್ಧಾರವನ್ನು ಹಿಂದಕ್ಕೆ ತೆಗೆದು­ಕೊಂಡು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಳ್ಳ­ಬೇಕೆಂದು ವಿನಂತಿ.
ರಾಘವೇಂದ್ರ ಹಾರಣಗೇರಾ, ಹಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT