ಬ್ರಹ್ಮಾವರ: ‘ಸನ್ಮಾನ ಸ್ವೀಕರಿಸುವುದು ಸುಲಭ. ಆದರೆ ಆ ಸನ್ಮಾನಕ್ಕೆ ಉತ್ತರಿಸುವುದು ಬಲು ಕಷ್ಟದ ಕೆಲಸ. ಬೇರೆ ಕಡೆ ಊಟ ಮಾಡುವುದಕ್ಕಿಂತ ನಮ್ಮ ಮನೆಯಲ್ಲಿ ತಾಯಿಯ ಕೈಯೂಟ ಹೇಗೆ ಹಿತವೆನಿಸುತ್ತದೆಯೋ ಹಾಗೆ ನಮ್ಮವರು ಗುರುತಿಸಿ ಗೌರವಿಸುತ್ತಿರುವುದು ಅತೀ ಹೆಚ್ಚು ಖುಷಿ ನೀಡುತ್ತದೆ’ ಎಂದು ಯಕ್ಷಗಾನ ಕಲಾವಿದ ತೊಂಬಟ್ಟು ವಿಶ್ವನಾಥ ಆಚಾರ್ಯ ಹೇಳಿದರು.
ಗುಂಡ್ಮಿಯ ಹದ್ದಿನಬೆಟ್ಟಿನಲ್ಲಿ ಇತ್ತೀಚೆಗೆ ರಾಘವೇಂದ್ರ ಆಚಾರ್ಯ ಮತ್ತು ಅಂಗನವಾಡಿ ಮಿತ್ರರು ಏರ್ಪಡಿಸಿದ್ದ ನೀಲಾವರ ಮೇಳದ ಯಕ್ಷಗಾನ ಪ್ರದರ್ಶನದ ವೇಳೆ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಉದ್ಯಮಿ ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ನ ನಿಯೋಜಿತ ಅಧ್ಯಕ್ಷ ಆನಂದ್ ಗುಂಡ್ಮಿ ಅಧ್ಯಕ್ಷತೆ ವಹಿಸಿದ್ದರು.
ಮಣೂರು ಶಾಲೆಯ ಅಧ್ಯಾಪಕ ಶ್ರೀಧರ ಶಾಸ್ತ್ರೀ, ಯಕ್ಷಗಾನ ಕಲಾಭಿಮಾನಿ ದಿನೇಶ್ ಆಚಾರ್ಯ, ಉದ್ಯಮಿ ಪುಂಡಲೀಕ ಪೈ, ಅರಕ್ಷಕ ಸಿಬ್ಬಂದಿ ಅಶ್ರಫ್ ಮತ್ತು ಕಾರ್ಯಕ್ರಮ ಸಂಘಟಕ ರಾಘವೇಂದ್ರ ಗುಂಡ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪತ್ರಕರ್ತ ಪ್ರಭಾಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.