ಪಟಮ್ದಾ, ಜಾರ್ಖಂಡ್ (ಪಿಟಿಐ): ಕೈಗಾರಿಕೋದ್ಯಮಿಗಳು ಹಾಗೂ ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ದೇಶದ ಕಲ್ಲಿದ್ದಲು ವಲಯವನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದರು.
ಶನಿವಾರ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ರ್್ಯಾಲಿಯಲ್ಲಿ ಮಾತನಾಡಿದ ಸೋನಿಯಾ, ಉದ್ಯಮಿಗಳ ಹಿತಕ್ಕಾಗಿ ಮೋದಿ ದೇಶದ ಜನರ ಹಿತವನ್ನು ಬಲಿ ಕೊಡಲು ಸಿದ್ಧರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಕಲ್ಲಿದ್ದಲು ವಲಯವನ್ನು ರಾಷ್ಟ್ರೀಕರಣಗೊಳಿಸಿತ್ತು. ಆದರೆ, ಬಿಜೆಪಿ ಕೆಲವೇ ಕೆಲವು ಉದ್ಯಮಿಗಳ ಲಾಭಕ್ಕಾಗಿ ಕಲ್ಲಿದ್ದಲು ವಲಯವನ್ನು ಖಾಸಗೀಕರಣ ಮಾಡಲು ಹೊರಟಿದೆ ಎಂದು ಟೀಕಿಸಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ (ನರೇಗಾ), ಭೂಸ್ವಾಧಿನ ಕಾಯ್ದೆ ಹಾಗೂ ಮಾಹಿತಿ ಹಕ್ಕು ಕಾಯ್ದೆಗಳನ್ನು ಮೋದಿ ದುರ್ಬಲ ಮಾಡುವ ಸಂಚು ರೂಪಿಸಿದ್ದಾರೆ. ಬಿಜೆಪಿ ಬಹಿರಂಗವಾಗಿ ಏನನ್ನು ಹೇಳುತ್ತದೆಯೋ ಅದಕ್ಕೆ ಅಂತರಂಗದಲ್ಲಿ ಅದಕ್ಕೆ ತತ್ವಿರುದ್ಧವಾಗಿ ನಡೆದುಕೊಳ್ಳುತ್ತದೆ ಎಂದು ನುಡಿದರು.
ಗುಜರಾತ್ನಲ್ಲಿ ಬಂಡವಾಳಶಾಹಿಗಳಿಗೆ ನೀಡಲು ಬುಡಕಟ್ಟು ಜನಾಂಗದ ಭೂಮಿಯನ್ನು ಕಸಿದುಕೊಂಡ ಮೋದಿ ಸರ್ಕಾರ ಆದಿವಾಸಿಗಳನ್ನು ನಿರ್ಗತಿಕರನ್ನಾಗಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.