ನವದೆಹಲಿ (ಐಎಎನ್ಎಸ್): ನ್ಯಾಯಮೂರ್ತಿಗಳ ನೇಮಕದಲ್ಲಿ ಹಸ್ತಕ್ಷೇಪ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಇದೀಗ ಸುಪ್ರೀಂಕೊರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
‘ಭ್ರಷ್ಟಾಚಾರ ಆರೋಪದ ಕೇಳಿಬಂದಿದ್ದ ನ್ಯಾಯಮೂರ್ತಿಯನ್ನು ಕಾಯಂಗೊಳಿಸಲು ಆಗ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಬಾಲಕೃಷ್ಣನ್ ಶಕ್ತಿಮೀರಿ ಪ್ರಯತ್ನಿಸಿದ್ದರು’ ಎಂದು ಅವರು ತಮ್ಮ ಬ್ಲಾಗ್ನಲ್ಲಿ ಆರೋಪಿಸಿದ್ದಾರೆ.
‘ನಾನು ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ ಆ ವ್ಯಕ್ತಿ ನ್ಯಾಯಮೂರ್ತಿಯಾಗಿದ್ದರು. ಹೀಗಾಗಿ ಅವರ ಭ್ರಷ್ಟಾಚಾರ ಹಿನ್ನೆಲೆ ಚೆನ್ನಾಗಿ ಗೊತ್ತಿತ್ತು. ಇದನ್ನು ನಾನು ನ್ಯಾಯಮೂರ್ತಿಗಳ ನೇಮಕ ಶಿಫಾರಸು ಮಂಡಳಿ ಸದಸ್ಯರಾಗಿದ್ದ ಕಪಾಡಿಯಾ ಅವರಿಗೆ ತಿಳಿಸಿದ್ದೆ’ ಎಂದು ಕಟ್ಜು ಹೇಳಿಕೊಂಡಿದ್ದಾರೆ.
‘ಆದರೆ, ನನ್ನ ಆಕ್ಷೇಪದ ಹೊರತಾಗಿಯೂ ಆ ವ್ಯಕ್ತಿಯ ಹೆಸರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಲಾಯಿತು. ಬಾಲಕೃಷ್ಣನ್ ಹಟಕ್ಕೆ ಬಿದ್ದು ಆ ವ್ಯಕ್ತಿಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮಾಡಿದರು’ ಎಂದು ಅವರು ಆರೋಪಿಸಿದ್ದಾರೆ.