ರಾಮಮೂರ್ತಿನಗರ 26ನೇ ವಾರ್ಡ್ನಲ್ಲಿ ವಾರಕ್ಕೊಮ್ಮೆಯಾದರೂ ಕಸ ತೆಗೆದುಕೊಂಡು ಹೋಗುವ ವಾಹನ ಬರುವುದಿಲ್ಲ. ಈ ಕುರಿತು ಇಲ್ಲಿನ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದರೆ, ‘ಹೌದೆ, ಈಗಲೇ ಕಳುಹಿಸುತ್ತೇವೆ’ ಎಂದು ಹೇಳುತ್ತಾರೆ. ಆದರೆ ಯಾರನ್ನೂ ಕಳುಹಿಸುವುದಿಲ್ಲ. ಯಾವ ರಸ್ತೆಯಲ್ಲಿ ನೋಡಿದರೂ ಕಸ ತುಂಬಿ ಸುರಿಯುತ್ತಿದೆ. ರಸ್ತೆಗಳಲ್ಲಿ, ನೀರು ಹರಿಯುವ ಚರಂಡಿಗಳಲ್ಲಿ ನಾಗರಿಕರು ಕಸದ ಗುಡ್ಡೆಗಳನ್ನೇ ಮಾಡುತ್ತಿದ್ದಾರೆ.
ಆರೋಗ್ಯ ಅಧಿಕಾರಿಗಳು ಇದ್ದರೂ ಇಲ್ಲದಂತೆ ಆಗಿದೆ. ಸೊಳ್ಳೆ ಔಷಧಿಯನ್ನು ಮೂರು ತಿಂಗಳಿಗೊಮ್ಮೆ ಸಿಂಪಡಿಸುತ್ತಾರೆ, ಅದೂ ನಾವು ಪಾಲಿಕೆ ಕಚೇರಿಗಳಿಗೆ ಭೇಟಿ ಮಾಡಿ ತಿಳಿಸಿದರೆ ಮಾತ್ರ. ಇಲ್ಲವಾದರೆ ಅದನ್ನೂ ಮಾಡುವುದಿಲ್ಲ.
ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇಲ್ಲಿ ಕಸದ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದಾಗಿ ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಬೇಕು. ಜತೆಗೆ ಕೆಲಸ ಮಾಡದ ಕೆಲಸಗಾರರಿಗೆ ಹಣ ಬಿಡುಗಡೆ ಮಾಡಿ ಸಾರ್ವಜನಿಕರ ಹಣ ವ್ಯರ್ಥ ಮಾಡಬೇಡಿ ಎಂಬುದು ನಮ್ಮ ವಿನಂತಿ.