ತಿರುವನಂತಪುರ (ಪಿಟಿಐ): ಯುಪಿಎ ಅಧಿಕಾರದ ಅವಧಿಯಲ್ಲಿ ನೇಮಕಗೊಂಡಿರುವ ರಾಜ್ಯಪಾಲರು ರಾಜೀನಾಮೆ ನೀಡಬೇಕೆಂಬ ಕಾಂಗ್ರೆಸ್ ಮುಖಂಡ ಪಂದಲಂ ಸುಧಾಕರನ್ ಅವರ ಹೇಳಿಕೆ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.
ಮಹಾರಾಷ್ಟ್ರ ರಾಜ್ಯಪಾಲ ಕೆ. ಶಂಕರನಾರಾಯಣನ್ ಮತ್ತು ಮಿಜೋರಾಂ ರಾಜ್ಯಪಾಲ ವಕ್ಕಂ ಪುರುಷೋತ್ತಮನ್ ಅವರು ಕೇರಳದ ಕಾಂಗ್ರೆಸ್ ಮುಖಂಡರಾಗಿದ್ದಾರೆ. ಇವರಿಬ್ಬರೂ ಪಕ್ಷದ ನಿಷ್ಠಾವಂತ ನಾಯಕರಾಗಿದ್ದು, ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಇವರ ಅನುಭವವನ್ನು
ಪಕ್ಷ ಬಳಸಿಕೊಳ್ಳಬೇಕೆಂದು ಫೇಸ್ಬುಕ್ನಲ್ಲಿ ಸಲಹೆ ಮಾಡಿದ್ದಾರೆ.
‘ಯುಪಿಎ ಅವಧಿಯಲ್ಲಿ ನೇಮಕಗೊಂಡಿದ್ದ ರಾಜ್ಯಪಾಲರು ರಾಜೀನಾಮೆ ನೀಡಬೇಕು. ಹಿಂದಿನಿಂದ ಅನೌಪಚಾರಿಕವಾಗಿ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಪಾಲಿಸಬೇಕು. ಕಾಂಗ್ರೆಸ್ ಪಕ್ಷದ ಅಂತಸ್ತಿನ ದೃಷ್ಟಿಯಿಂದ ಹುದ್ದೆಯನ್ನು ತೊರೆಯಬೇಕು’ ಎಂದೂ ಹೇಳಿದ್ದಾರೆ.
ಸುಧಾಕರನ್ ಅವರ ಹೇಳಿಕೆಗೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಈವರೆಗೆ ಪ್ರತಿಕ್ರಿಯೆ ನೀಡಿಲ್ಲ. ಈ ಹೇಳಿಕೆ ಬಗ್ಗೆ ಚರ್ಚೆ ಆರಂಭವಾಗುತ್ತಿದ್ದಂತೆಯೇ ಸುಧಾಕರನ್ ಸಮರ್ಥನೆಯನ್ನೂ ನೀಡಿದ್ದಾರೆ. ‘ರಾಜ್ಯಪಾಲರ ರಾಜೀನಾಮೆಗೆ ಸಂಬಂಧಿಸಿ ಬಿಜೆಪಿ ಮುಖಂಡರು ಹಗುರವಾಗಿ ಮಾತನಾಡಿದ್ದರಿಂದ ಮನಸ್ಸಿಗೆ ನೋವಾಗಿತ್ತು. ಹೀಗಾಗಿ ಈ ರೀತಿಯ ಹೇಳಿಕೆ ನೀಡಿದ್ದೇನೆಯೇ ಹೊರತು ಬೇರೆ ಉದ್ದೇಶವಿರಲಿಲ್ಲ’ ಎಂದು ಹೇಳಿದ್ದಾರೆ.