ನವದೆಹಲಿ (ಪಿಟಿಐ): ಸಂಸತ್ತಿನ ಮುಂಬರುವ ಮುಂಗಾರು ಅಧಿವೇಶನದಲ್ಲಿ ಲಲತ್ ಮೋದಿ ವೀಸಾ ವಿವಾದ ಇಟ್ಟುಕೊಂಡು ವಿರೋಧ ಪಕ್ಷ ಕಾಂಗ್ರೆಸ್ ಕೋಲಾಹಲ ಸೃಷ್ಟಿಸುವ ಸಾಧ್ಯತೆಗಳನ್ನು ಕೇಂದ್ರ ಸಚಿವ ಅರುಣ್ ಜೇಟ್ಲಿ ಅಲ್ಲಗಳೆದಿದ್ದಾರೆ.
ಕೆಲವರು ಟಿ.ವಿ ಚಾನಲ್ಗಳಿಗೆ ಮಾತ್ರ ಪ್ರಸ್ತುತ ಎನಿಸುತ್ತಾರೆ. ಆದರೆ, ಆಡಳಿತ ಮಾಡಲು ಅಲ್ಲ ಎಂದು ವ್ಯಂಗ್ಯವಾಡಿದ್ದಾರೆ.
‘ಕೆಲವು ಜನರು ಟಿ.ವಿ ಚಾನಲ್ಗಳಿಗೆ ಮಾತ್ರ ಪ್ರಸ್ತುತವಾಗಿರಬಹುದು. ಆದರೆ, ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಅವರು ಆಡಳಿತಕ್ಕೆ ಪ್ರಸ್ತುತವಲ್ಲ’ ಎಂದು ಜೇಟ್ಲಿ ಅವರು ಕಟಕಿಯಾಡಿದ್ದಾರೆ.
ಅಧಿವೇಶನದಲ್ಲಿ ಲಲಿತ್ ಮೋದಿ ವೀಸಾ ವಿವಾದವನ್ನಿಟ್ಟುಕೊಂಡು ಕಾಂಗ್ರೆಸ್ ಪಕ್ಷವು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ರಾಜೀನಾಮೆಗೆ ಪಟ್ಟು ಹಿಡಿದು ಗದ್ದಲ ಸೃಷ್ಟಿಸುವ ಸಾಧ್ಯತೆಗಳಿವೆಯೇ ಎಂಬ ಪ್ರಶ್ನೆಗೆ ಜೇಟ್ಲಿ ಅವರು ಹೀಗೆ ಉತ್ತರಿಸಿದರು.
ಆದರೆ, ಸ್ವಯಂ ಅವರನ್ನೂ ಸೇರಿದಂತೆ ಲಲಿತ್ ಮೋದಿ ಅವರು ವಿವಾದದಲ್ಲಿ ಎಳೆದಿರುವ ರಾಜಕಾರಣಿಗಳ ಬಗೆಗಿನ ಯಾವುದೇ ಪ್ರಶ್ನೆಗಳಿಂದ ಅವರು ನುಣುಚಿಕೊಂಡರು.
ಬೆಂಬಲಿಸುವ ವಿಶ್ವಾಸ: ಇದೇ ವೇಳೆ, ಭೂ ಸ್ವಾಧೀನ ಮಸೂದೆ ಹಾಗೂ ಜಿಎಸ್ಟಿ ಮಸೂದೆ (ಏಕರೂಪದ ಸರಕು ಮತ್ತು ಸೇವಾ ತೆರಿಗೆ), ಈ ಬಾರಿಯ ಅಧಿವೇಶನದಲ್ಲಿ ಮಹತ್ವದ ವಿಷಯಗಳು ಎಂದರು.
‘ದೇಶದ ಆರ್ಥಿಕತೆಗೆ ಈ ಮಸೂದೆಗಳು ತುಂಬಾನೇ ಮುಖ್ಯ. ದೇಶದ ಅಭಿವೃದ್ಧಿಯ ವಿಷಯದಲ್ಲಿ ಯಾವುದೇ ರಾಜಕೀಯ ಪಕ್ಷಗಳು ನಕಾರಾತ್ಮಕ ಮಾರ್ಗ ಅನುಸರಿಸುವುದಿಲ್ಲ ಎಂಬುದು ಸರ್ಕಾರದ ವಿಶ್ವಾಸ’ ಎಂದು ಅವರು ನುಡಿದರು.