ನವದೆಹಲಿ (ಪಿಟಿಐ): ತಿರುವನಂತಪುರ ಸಂಸದ ಶಶಿ ತರೂರ್ ಅವರನ್ನು ಸೋಮವಾರ ಕಾಂಗ್ರೆಸ್ ವಕ್ತಾರ ಸ್ಥಾನದಿಂದ ವಜಾಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶಂಸಿದ್ದಾರೆ ಎಂದು ಕೇರಳ ಕಾಂಗ್ರೆಸ್ ಸಮಿತಿಯು ಎಐಸಿಸಿಯ ಶಿಸ್ತುಪಾಲನ ಸಮಿತಿಗೆ ದೂರು ನೀಡಿತ್ತು.
ಸಮಿತಿಯು ತರೂರ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಕ್ತಾರ ಸ್ಥಾನದಿಂದ ವಜಾಗೊಳಿಸಿದೆ. ಸಮಿತಿಯ ಈ ನಿರ್ಧಾರಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒಪ್ಪಿಗೆ ನೀಡಿದ್ದಾರೆ. ಕೇರಳ ಕಾಂಗ್ರೆಸ್ ಸಮಿತಿಯ ದೂರಿನ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜನಾರ್ಧನ ದ್ವಿವೇದಿ ಪ್ರತಿಕ್ರಿಯಿಸಿದ್ದಾರೆ.
ನರೇಂದ್ರ ಮೋದಿ ಅವರು ಶಶಿ ತರೂರ್ ಅವರನ್ನು ‘ಸ್ವಚ್ಛ ಭಾರತ್ ಅಭಿಯಾನ’ದ ರಾಯಭಾರಿಯನ್ನಾಗಿ ನೇಮಕ ಮಾಡಿದ್ದರು. ಇದಕ್ಕೆ ತರೂರ್ ಒಪ್ಪಿಗೆ ಸೂಚಿಸಿದ ಮೇಲೆ ಕೇರಳ ಕಾಂಗ್ರೆಸ್ ಸಮಿತಿ ಹೈಕಮಾಂಡ್ಗೆ ದೂರು ನೀಡಿತ್ತು.