ಕೆ.ಎಸ್.ಒ.ಯು. ಬೆಳವಣಿಗೆಗಳ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭರತ್ ಲಾಲ್ ಮೀನಾ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.
*ಇಲಾಖೆ ಮಧ್ಯಪ್ರವೇಶಿಸಿದ್ದರೆ ಕೆ.ಎಸ್.ಒ.ಯು. ಕೋರ್ಸ್ಗಳ ಮಾನ್ಯತೆ ರದ್ದಾಗುವುದನ್ನು ತಡೆಯಬಹುದಿತ್ತೇ?
ಕೆ.ಎಸ್.ಒ.ಯು. ವೃತ್ತಿಪರ ಶಿಕ್ಷಣ ಕೋರ್ಸ್ಗಳನ್ನು ಸ್ಥಾಪಿಸುವುದಕ್ಕೆ ವಿ.ವಿ. ಸಿಂಡಿಕೇಟ್ ಒಪ್ಪಿರಲಿಲ್ಲ. ಇಲಾಖೆ ಕೂಡ ಕೋರ್ಸ್ ಆರಂಭಿಸದಂತೆ ಸೂಚಿಸಿತ್ತು. ಮಾನ್ಯತೆ ರದ್ದಾಗಲು ಏನು ಕಾರಣ ಎಂಬುದರ ಅಧ್ಯಯನ ನಡೆಸಲು ಇಲಾಖೆಯ ತಂಡವೊಂದನ್ನು ಕಳುಹಿಸಲಾಗಿದೆ. ತಂಡವು ಕೂಲಂಕಷ ಪರಿಶೀಲನೆ ನಡೆಸಲಿದೆ.
* ಸಾವಿರಾರು ಮುಗ್ಧ ಪದವೀಧರರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಹೇಗೆ ರಕ್ಷಿಸುತ್ತೀರಿ?
ಸಾವಿರಾರು ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆದೇಶ ವಾಪಸ್ ಪಡೆಯುವಂತೆ ಯುಜಿಸಿಗೆ ಮನವಿ ಮಾಡುತ್ತೇವೆ. ಜೊತೆಗೆ ಕಾನೂನು ಹೋರಾಟದ ಹಾದಿ ಇದ್ದೇ ಇದೆ.
* ಇಂತಹ ಘಟನೆಗಳು ಮರುಕಳಿಸದಂತೆ ಏನು ಮಾಡುತ್ತೀರಿ?
ಯುಜಿಸಿ, ಕೇಂದ್ರ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದೂರಶಿಕ್ಷಣ ನೀಡುವ ವಿ.ವಿ.ಗಳಿಗೆ ಸೂಚಿಸಲಾಗುವುದು. ರಾಜ್ಯದ ವ್ಯಾಪ್ತಿಯಲ್ಲಿ ಮಾತ್ರ ದೂರ ಶಿಕ್ಷಣ ನೀಡುವಂತೆ ತಿಳಿಸುತ್ತೇವೆ. ಕೆ.ಎಸ್.ಒ.ಯು. ಕಾಯ್ದೆಗೆ ತಿದ್ದುಪಡಿ ತರುವ ಚಿಂತನೆಯೂ ಇದೆ.