ನವದೆಹಲಿ: ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪಿನ ಜಾರಿಗೆ ತಕ್ಷಣವೇ ನೀರು ನಿರ್ವಹಣಾ ಮಂಡಳಿ ರಚಿಸಬೇಕೆಂದು ತಮಿಳುನಾಡಿನ ಮುಖ್ಯಮಂತ್ರಿ ಜೆ. ಜಯಲಲಿತಾ ಕೇಂದ್ರ ಸರ್ಕಾರವನ್ನು ಮಂಗಳವಾರ ಆಗ್ರಹಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ ಜಯಲಲಿತಾ, ನ್ಯಾಯಮಂಡಳಿ ಐತೀರ್ಪಿನ ಅನ್ವಯ ತಮಿಳುನಾಡು, ಕರ್ನಾಟಕದ ನಡುವೆ ನ್ಯಾಯಸಮ್ಮತವಾಗಿ ನೀರಿನ ಹಂಚಿಕೆ ಆಗಬೇಕಾದರೆ ವಿಳಂಬ ಮಾಡದೆ ನೀರು ನಿರ್ವಹಣಾ ಮಂಡಳಿ ರಚಿಸಬೇಕೆಂದು ಒತ್ತಾಯಿಸಿದ್ದಾರೆ.
ಕಾವೇರಿ ನ್ಯಾಯಮಂಡಳಿ 2007ರ ಫೆ.5ರಂದು ಐತೀರ್ಪು ನೀಡಿದೆ. ತಮಿಳುನಾಡಿನ ನಿರಂತರ ಒತ್ತಡ ಹಾಗೂ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದಾಗಿ ಕೇಂದ್ರ ಸರ್ಕಾರ 2013ರ ಫೆ.19ರಂದು ಅಧಿಸೂಚನೆ ಹೊರಡಿಸಿದೆ. ನ್ಯಾಯಮಂಡಳಿ ತೀರ್ಪು ಜಾರಿಯಾಗಲು ನಿರ್ವಹಣಾ ಮಂಡಳಿ, ಉಸ್ತುವಾರಿ ಸಮಿತಿ ರಚಿಸಬೇಕೆಂದು ಹೇಳಿದ್ದಾರೆ.
ತಾತ್ಕಾಲಿಕ ಉಸ್ತುವಾರಿ ಸಮಿತಿ: ಸದ್ಯ ಕೇಂದ್ರ ಸರ್ಕಾರ ನ್ಯಾಯಮಂಡಳಿ ಐತೀರ್ಪು ಜಾರಿಗೆ ತಾತ್ಕಾಲಿಕವಾದ ಉಸ್ತುವಾರಿ ಸಮಿತಿ ರಚಿಸಿದೆ. ಈ ಸಮಿತಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಜಯಲಲಿತಾ ಮೋದಿ ಅವರಿಗೆ ವಿವರಿಸಿದ್ದಾರೆ.
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಅಗತ್ಯ ಕುರಿತು ಪ್ರಧಾನಿ ಅವರಿಗೆ ಮನವರಿಕೆ ಮಾಡಲಾಗಿದೆ. ತಾಳ್ಮೆಯಿಂದ ಎಲ್ಲ ವಿಷಯಗಳನ್ನು ಆಲಿಸಿದ ಪ್ರಧಾನಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆಂದು ತಮಿಳುನಾಡು ಮುಖ್ಯಮಂತ್ರಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಮೇ 26ರಂದು ಅಧಿಕಾರ ಸ್ವೀಕರಿಸಿದ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದ ಜಯಲಲಿತಾ ದೂರ ಉಳಿದಿದ್ದರು. ಶ್ರೀಲಂಕಾ ಅಧ್ಯಕ್ಷ ರಾಜಪಕ್ಷೆ ಅವರನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ ಬಗ್ಗೆ ಜಯಲಲಿತಾ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಮೊದಲ ಬಾರಿಗೆ ಜಯಾ ಪ್ರಧಾನಿ ಅವರನ್ನು ಭೇಟಿ ಮಾಡಿ ಸುಮಾರು ಐವತ್ತು ನಿಮಿಷ ಮಾತುಕತೆ ನಡೆಸಿದರು.