ಗೋಕಾಕ (ಬೆಳಗಾವಿ ಜಿಲ್ಲೆ): 'ನನ್ನ ಮಗ ಮೃತರಾದಾಗ ನನಗೆ ನರೇಂದ್ರ ಮೋದಿ, ಸುಷ್ಮಾ ಸ್ವರಾಜ್ ಅವರು ಬಹಳ ಸಹಾಯ ಮಾಡಿದ್ದಾರೆ ಎನ್ನುವುದು ಶುದ್ಧ ಸುಳ್ಳು. ಆಗ ನಾನು ಇವರನ್ನು ಸಂಪರ್ಕಿಸಿಯೇ ಇಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
'ಸಿದ್ದರಾಮಯ್ಯ ಅವರ ಮಗ ಮೃತರಾದಾಗ ಮೋದಿ ಅವರು ಮಾಡಿದ ಸಹಾಯವನ್ನು ಸಿದ್ದರಾಮಯ್ಯ ಮರೆತಿದ್ದಾರೆ. ಕನಿಷ್ಠ ಸೌಜನ್ಯ ಕೂಡ ಉಳಿಸಿಕೊಂಡಿಲ್ಲ' ಎಂಬ ಎಚ್.ಡಿ. ಕುಮಾರಸ್ವಾಮಿ ಅವರ ಮಾತಿಗೆ ಗೋಕಾಕದಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ ಅವರು, 'ನನ್ನ ಮಗ ವಿದೇಶದಲ್ಲಿ ಮೃತಪಟ್ಟಿದ್ದ. ಮೃತದೇಹ ಇಲ್ಲಿಗೆ ತರಿಸಿ ಅಂತ್ಯಕ್ರಿಯೆ ಮಾಡಿದ್ದೇನೆ ಅಷ್ಟೆ. ಆ ಸಂದರ್ಭದಲ್ಲಿ ಸಹಾಯಕ್ಕಾಗಿ ಮೋದಿ ಅವರನ್ನಾಗಲಿ, ಬೇರೆ ಯಾರನ್ನೇ ಆಗಲಿ ಸಂಪರ್ಕಿಸುವ ಪ್ರಮೇಯವೇ ಬಂದಿಲ್ಲ. ಇವರೆಲ್ಲ ಸುಳ್ಳು ಹೇಳುತ್ತಿದ್ದಾರೆ' ಎಂದರು.
'ಪ್ರಜ್ವಲ್ ಪ್ರಕರಣದ ಕುರಿತು ಎಸ್.ಐ.ಟಿ ವರದಿಯೇ ಅಂತಿಮ. ವರದಿ ಬಂದ ಮೇಲೆ ಕ್ರಮ ಕೈಗೊಳ್ಳುತ್ತೇನೆ' ಎಂದರು.
'ಈ ಹಿಂದೆ ಕೇಂದ್ರದಲ್ಲಿ 55 ವರ್ಷ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಯಾರಾದ್ದಾದರೂ ತಾಳಿ ಕಿತ್ತುಕೊಂಡಿದ್ದೇವೆಯೇ? ಈಗಲೂ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಎಲ್ಲಿ, ಯಾರ ತಾಳಿ ಕಿತ್ತುಕೊಂಡಿದ್ದೇವೆ? ಒಬ್ಬ ಪ್ರಧಾನಿ ಆಗಿ ಮೋದಿ ಅವರು ಇಂಥ ಸುಳ್ಳು ಪ್ರಚಾರ ಮಾಡಬಾರದು' ಎಂದರು.
'ಇವರು ಹೇಳಿದ್ದ ಅಚ್ಚೇ ದಿನಗಳು ಈಗ ಎಲ್ಲಿ ಹೋದವು? ಹಣದುಬ್ಬರ ಕಡಿಮೆ ಆಯಿತೇ? ರೈತರ ಆದಾಯ ದ್ವಿಗುಣ ಆಯಿತೇ? ತೈಲಗಳ ದರ ಕಡಿಮೆ ಆಯಿತೇ? ಹತ್ತು ವರ್ಷಗಳ ಸಾಧನೆ ಹೇಳಿ ಮತ ಕೇಳುವ ಬದಲು ತಾಳಿ, ಬಳೆ, ಮೀಸಲಾತಿ ಕಿತ್ತುಕೊಳ್ಳುತ್ತಾರೆ ಎಂದೆಲ್ಲ ಸುಳ್ಳು ಹೇಳುತ್ತಿದ್ದಾರೆ. ಇಷ್ಟೊಂದು ನೀಚ ರಾಜಕಾರಣ ಮಾಡಬಾರದು' ಎಂದೂ ಕಿಡಿ ಕಾರಿದರು.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, 'ಪೆನ್ ಡ್ರೈವ್ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೈವಾಡ ಇದೆ ಎಂದು ಕುಮಾರಸ್ವಾಮಿ ಅರೋಪ ಮಾಡಿರಬಹುದು. ಅದನ್ನು ಸಾಬೀತು ಮಾಡುವುದು ವಿಶೇಷ ತನಿಖಾ ತಂಡ. ಯಾರು ಏನೇ ಹೇಳಿದರೂ ಅರೋಪವಷ್ಟೇ. ತನಿಖಾ ವರದಿ ನಂತರ ಸತ್ಯ ಗೊತ್ತಾಗಲಿದೆ' ಎಂದರು.