ನವದೆಹಲಿ (ಐಎಎನ್ಎಸ್): ಲೋಕಸಭಾ ಚುನಾವಣೆ ವೇಳೆ ಮಾಧ್ಯಮಗಳಲ್ಲಿ 694 ‘ಕಾಸಿಗಾಗಿ ಸುದ್ದಿ’ಗಳು ಪ್ರಕಟವಾಗಿವೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿ ನಾಲ್ಕು ತಿಂಗಳಾದರೂ ಈ ಬಗ್ಗೆ ಭಾರತೀಯ ಪತ್ರಿಕಾ ಮಂಡಳಿಗೆ ಇದುವರೆಗೂ ಅಧಿಕೃತ ಮಾಹಿತಿ ನೀಡಿಲ್ಲ.
‘ಲೋಕಸಭಾ ಚುನಾವಣಾ ಸಂದರ್ಭದಲ್ಲಿ 700 ‘ಕಾಸಿಗಾಗಿ ಸುದ್ದಿ ’ ಪ್ರಕರಣ ಪತ್ತೆಯಾಗಿರುವುದು ಮಾಧ್ಯಮಗಳ ವರದಿಯಿಂದ ತಿಳಿದಿತ್ತು. ಆಯೋಗದ ಅಧಿಕೃತ ವರದಿ ಕೈ ಸೇರದ ಹೊರತು ತಪ್ಪಿತಸ್ಥ ಮಾಧ್ಯಮ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸುವುದು ಅಥವಾ ಕಾರಣ ಕೇಳಿ ನೋಟಿಸ್ ನೀಡುವುದು ಸಾಧ್ಯವಿಲ್ಲ’ ಎಂದು ಪತ್ರಿಕಾ ಮಂಡಳಿಯ ಅಧಿಕಾರಿ ಹೇಳಿದ್ದಾರೆ.
ಚುನಾವಣೆ ಮುಗಿದು ನಾಲ್ಕು ತಿಂಗಳಾದರೂ ವರದಿ ಕೈಸೇರದ ಕಾರಣ ಪತ್ರಿಕಾ ಮಂಡಳಿ ಕಳೆದ ವಾರ ಆಯೋಗಕ್ಕೆ ಜ್ಞಾಪನಾ ಪತ್ರ ಬರೆದಿದೆ. ಈ ಜ್ಞಾಪನಾ ಪತ್ರಕ್ಕೂ ಚುನಾವಣಾ ಆಯೋಗ ಇದುವರೆಗೂ ಪ್ರತಿಕ್ರಿಯಿಸಿಲ್ಲ.