ನವದೆಹಲಿ/ರಾಜ್ಕೋಟ್: ಬಿಹಾರ ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಬಳಿಕ ಇದೀಗ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಅಧ್ಯಕ್ಷ ಪ್ರವೀಣ್ ತೊಗಾಡಿಯಾ ದ್ವೇಷ ಭಾಷಣ ಮಾಡಿ ದೊಡ್ಡ ವಿವಾದ ಹುಟ್ಟು ಹಾಕಿದ್ದಾರೆ.
‘ಹಿಂದೂಗಳು ವಾಸಿಸುವ ಪ್ರದೇಶದಲ್ಲಿ ಮುಸ್ಲಿಮರು ಆಸ್ತಿ ಖರೀದಿಸದಂತೆ ನೋಡಿಕೊಳ್ಳಬೇಕು’ ಎಂದು ಗುಜರಾತ್ನ ಭಾವನಗರದಲ್ಲಿ ಶನಿವಾರ ರಾತ್ರಿ ತೊಗಾಡಿಯಾ ನೀಡಿದ್ದ ಹೇಳಿಕೆಯನ್ನು ಕಾಂಗ್ರೆಸ್ ಮತ್ತಿತರ ಪಕ್ಷಗಳು ತೀವ್ರವಾಗಿ ಖಂಡಿಸಿವೆ.
ಈ ನಡುವೆ ಚುನಾವಣಾ ಆಯೋಗವು ತೊಗಾಡಿಯಾ ಭಾಷಣದ ಸಿ.ಡಿ ಪಡೆದುಕೊಳ್ಳುವುದಕ್ಕೆ ಮುಂದಾಗಿದೆ.
‘ಭಾಷಣದ ಧ್ವನಿ ಮುದ್ರಿಕೆಯನ್ನು ಆಲಿಸಿ ತೊಗಾಡಿಯಾ ವಿರುದ್ಧ ಕೈಗೊಳ್ಳಬಹುದಾದ ಕ್ರಮವನ್ನು ನಿರ್ಧರಿಸಲಾಗುತ್ತದೆ’ ಎಂದು ಭಾವನಗರ ಜಿಲ್ಲಾಧಿಕಾರಿ ಪಿ.ಕೆ.ಸೋಲಂಕಿ, ರಾಜಕೋಟ್ನಲ್ಲಿ ಹೇಳಿದ್ದಾರೆ. ‘ನಮ್ಮ ಸಮಾಜದಲ್ಲಿ ಇಂಥ ವ್ಯಕ್ತಿಗಳಿಗೆ ಜಾಗವಿಲ್ಲ’ ಎಂದು ಎನ್ಡಿಎ ಅಂಗ ಪಕ್ಷ ಶಿರೋಮಣಿ ಅಕಾಲಿ ದಳ ಟೀಕಿಸಿದರೆ, ಬಿಜೆಪಿ ತೊಗಾಡಿಯಾ ಬೆಂಬಲಕ್ಕೆ ನಿಂತಿದೆ.
‘ನಾನು ತೊಗಾಡಿಯಾ ಬಳಿ ಮಾತನಾಡಿದೆ. ಅವರು ಇಂಥ ಹೇಳಿಕೆ ನೀಡಿಲ್ಲವಂತೆ’ ಎಂದು ಬಿಜೆಪಿ ವಕ್ತಾರ ಪ್ರಕಾಶ್್ ಜಾವಡೇಕರ್್ ನವದೆಹಲಿ ಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ‘ತೊಗಾಡಿಯಾ ಈ ರೀತಿ ಹೇಳಿಲ್ಲ. ಇದರಲ್ಲಿ ಏನೋ ಸಂಚಿದೆ’ ಎಂದು ಆರ್ಎಸ್ಎಸ್ ವಕ್ತಾರ ರಾಮ್ ಮಾಧವ್ ಹೇಳಿದ್ದಾರೆ.
ತೊಗಾಡಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್, ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಬಂಧನಕ್ಕೆ ಆಗ್ರಹ: ಶಾಂತಿ ಕದಡಿದ್ದಕ್ಕಾಗಿ ತೊಗಾಡಿಯಾ ಅವರನ್ನು ಬಂಧಿಸಬೇಕೆಂದು ಎಎಪಿ ಪಟ್ಟು ಹಿಡಿದಿದೆ. ಈ ವರದಿಯನ್ನು ಅಲ್ಲಗಳೆದಿರುವ ತೊಗಾಡಿಯಾ, ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಏನಿದು ಘಟನೆ: ಭಾವನಗರ ಮೇಘನಿ ವೃತ್ತದ ಬಳಿ ಮುಸ್ಲಿಂ ಉದ್ಯಮಿಯೊಬ್ಬರು ಖರೀದಿಸಿರುವ ಮನೆ ಮುಂದೆ ಶನಿವಾರ ರಾತ್ರಿ ವಿಎಚ್ಪಿ ಹಾಗೂ ಬಜರಂಗದಳದ ಸದಸ್ಯರು ಧರಣಿ ಕೂತಿದ್ದರು. ಅಲ್ಲಿಗೆ ತೊಗಾಡಿಯಾ ಕೂಡ ಬಂದಿದ್ದರು.
ಹಿಂದೂಗಳು ವಾಸಿಸುವ ಪ್ರದೇಶದಲ್ಲಿ ಮುಸ್ಲಿಮರು ಮನೆ ಖರೀದಿಸದಂತೆ ನೋಡಿಕೊಳ್ಳಲು ವಿಎಚ್ಪಿ ಇಲ್ಲಿ ‘ರಾಮ್್ ಧುನ್’ ಹಾಗೂ ‘ರಾಮ್್ ದರ್ಬಾರ್’ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಗಾಗ ನಡೆಸುತ್ತಿದೆ. ಆದರೆ ಶನಿವಾರ ರಾತ್ರಿ ತೊಗಾಡಿಯಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮುಸ್ಲಿಂ ಉದ್ಯಮಿ ಮನೆ ವಶಕ್ಕೆ ತೆಗೆದುಕೊಂಡು ಅದರ ಮೇಲೆ ‘ಬಜರಂಗ ದಳ’ದ ನಾಮಫಲಕ ಹಾಕುವಂತೆ ಪ್ರತಿಭಟನಾಕಾರರಿಗೆ ಕುಮ್ಮಕ್ಕು ನೀಡಿದರು.
ವಿಷ ಕಾರುವವರು
‘ತೊಗಾಡಿಯಾ ಯಾವಾಗಲೂ ವಿಷ ಕಾರುತ್ತಾರೆ. ಇಂಥವರ ಬಗ್ಗೆ ಏನು ಹೇಳಬೇಕು’
– ಕಪಿಲ್ ಸಿಬಲ್, ಕೇಂದ್ರ ಸಚಿವ
ಚಿಕಿತ್ಸೆ ಕೊಡಿಸಬೇಕು
‘ತೊಗಾಡಿಯಾಗೆ ತಲೆ ಸರಿ ಇಲ್ಲ. ಅವರಿಗೆ ಚಿಕಿತ್ಸೆ ಕೊಡಿಸಬೇಕು’
–ರಷೀದ್್ಅಲ್ವಿ, ಕಾಂಗ್ರೆಸ್ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.