ಚಂಡೀಗಡ್ (ಪಿಟಿಐ): ಕೇಂದ್ರ ಸರ್ಕಾರದ ವಿವಾದಾತ್ಮಕ ಭೂಸ್ವಾಧೀನ ಮಸೂದೆಯನ್ನು ವಿರೋಧಿಸಿ ಕಾಂಗ್ರೆಸ್ ದೆಹಲಿಯಲ್ಲಿ ಭಾನುವಾರ ಹಮ್ಮಿಕೊಂಡಿರುವ ಕಿಸಾನ್ ರ್ಯಾಲಿಯಲ್ಲಿ ಪಂಜಾಬ್ನ ಸುಮಾರು 20 ಸಾವಿರ ರೈತರು ಭಾವಹಿಸಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಪ್ರತಾಪ್ ಸಿಂಗ್ ಬಜ್ವಾ ಅವರು ಶನಿವಾರ ತಿಳಿಸಿದ್ದಾರೆ.
ರ್ಯಾಲಿಯಲ್ಲಿ ಪಾಲ್ಗೊಳ್ಳಲಿರುವ 20 ಸಾವಿರ ಕಾರ್ಯಕರ್ತರ ಸಂಚಾರಕ್ಕಾಗಿ 300 ಬಸ್ಗಳು ಹಾಗೂ ಒಂದು ಸಾವಿರ ನಾಲ್ಕು ಚಕ್ರ ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿರುವ ಎಲ್ಲಾ ಕಾಂಗ್ರೆಸ್ ಶಾಸಕರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ರ್ಯಾಲಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮುನಿಸಿಕೊಂಡಿರುವ ಪಕ್ಷದ ನಾಯಕ ಅಮರಿಂದ್ ಸಿಂಗ್ ಅವರ ಬೆಂಬಲಿಗರೂ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಇದೇ ವೇಳೆ, ಭೂಸ್ವಾಧೀನ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಬೆಂಬಲ ಸೂಚಿಸಿದ ಅಕಾಲಿ ದಳ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಬಜ್ವಾ, ಇದು ಕೇಸರಿ ಪಕ್ಷದ ರೈತ ವಿರೋಧಿ ಮುಖವಾಡವನ್ನು ಬಹಿರಂಗ ಪಡಿಸಿದೆ ಎಂದು ಟೀಕಿಸಿದ್ದಾರೆ.