ನವದೆಹಲಿ (ಪಿಟಿಐ/ಐಎಎನ್ಎಸ್): ನಾಲ್ಕು ವರ್ಷದ ಪದವಿ ಶಿಕ್ಷಣ ಕಾರ್ಯಕ್ರಮ (ಎಫ್ಐಯುಪಿ–ಫೋರ್ ಇಯರ್ ಅಂಡರ್ ಗ್ರಾಜುಯೇಟ್ ಪ್ರೋಗ್ರಾಮ್) ರದ್ದು ಮಾಡುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನೀಡಿದ ನಿರ್ದೇಶನವನ್ನು ಪ್ರತಿಭಟಿಸಿ ದೆಹಲಿ ವಿಶ್ವವಿದ್ಯಾಲಯದ ಕುಲಪತಿ ದಿನೇಶ್ ಸಿಂಗ್ ಮಂಗಳವಾರ ರಾಜೀನಾಮೆ ನೀಡಿದರು.
ಈ ಬೆಳವಣಿಗೆಯಿಂದಾಗಿ, ಯುಜಿಸಿ ಹಾಗೂ ದೆಹಲಿ ವಿವಿ ನಡುವಣ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.
‘ಎಫ್ಐಯುಪಿ ವಿಷಯವಾಗಿ ವಿವಿ ಹಾಗೂ ಯುಜಿಸಿ ನಡುವಣ ಜಟಾಪಟಿ ಬಳಿಕ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ’ ಎಂದು ವಿವಿ ಮಾಧ್ಯಮ ಸಂಚಾಲಕ ಮಲಯ್ ನೀರವ್ ಹೇಳಿದ್ದಾರೆ.
ವಿವಾದಕ್ಕೆ ಕಾರಣವಾಗಿರುವ ನಾಲ್ಕು ವರ್ಷಗಳ ಪದವಿ ಶಿಕ್ಷಣ ಕಾರ್ಯಕ್ರಮ ರದ್ದುಪಡಿಸಿ, ಮೂರು ವರ್ಷದ ಪದವಿಗೆ ಮಾತ್ರ ಪ್ರವೇಶ ನೀಡುವಂತೆ ದೆಹಲಿ ವಿವಿ ಹಾಗೂ ಅದರ ವ್ಯಾಪ್ತಿಯ 64 ಕಾಲೇಜುಗಳಿಗೆ ಯುಜಿಸಿ ನಿರ್ದೇಶನ ನೀಡಿತ್ತು. ಇದಕ್ಕೆ ಸೊಪ್ಪುಹಾಕದ ಸಿಂಗ್, ನಿರ್ಧಾರ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟುಹಿಡಿದಿದ್ದರು.
ಯುಜಿಸಿಯ ಈ ನಿರ್ದೇಶನವು ವಿವಿ ಸ್ವಾಯತ್ತತೆ ಮೇಲಿನ ಅತಿಕ್ರಮಣ ಎಂದು ಸಿಂಗ್ ದೂರಿದ್ದರು. ಈ ಅಸಮಾಧಾನದಿಂದಲೇ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಈ ವಿವಾದದಲ್ಲಿ ಮಧ್ಯಪ್ರವೇಶಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಿಂದೇಟು ಹಾಕಿತ್ತು. ‘ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಿ’ ಎಂದು ವಿವಿ ಹಾಗೂ ಯುಜಿಸಿಗೆ ತಾಕೀತು ಮಾಡಿ ಸಚಿವಾಲಯ ಕೈತೊಳೆದುಕೊಂಡಿತ್ತು.
ಮಧ್ಯಪ್ರವೇಶಿಸಲು ‘ಸುಪ್ರೀಂ’ ನಕಾರ
ನವದೆಹಲಿ (ಪಿಟಿಐ): ಎಫ್ಐಯುಪಿ ವಿಷಯವಾಗಿ ಯುಜಿಸಿ ಹಾಗೂ ದೆಹಲಿ ವಿವಿ ನಡುವಣ ಸಂಘರ್ಷದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ಮಂಗಳವಾರ ನಿರಾಕರಿಸಿದೆ. ಎಫ್ಐಯುಪಿ ರದ್ದತಿಗೆ ಯುಜಿಸಿ ನೀಡಿದ್ದ ನಿರ್ದೇಶನವನ್ನು ಪ್ರಶ್ನಿಸಿ ಪ್ರೊ.ಆದಿತ್ಯನಾರಾಯಣ ಮಿಶ್ರಾ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈ ವಿಷಯವಾಗಿ ದೆಹಲಿ ಹೈಕೋರ್ಟ್ ಮೊರೆ ಹೋಗುವಂತೆ ಮಿಶ್ರಾ ಅವರಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.
ಪ್ರತಿಭಟನೆ ಕೈಬಿಟ್ಟ ವಿದ್ಯಾರ್ಥಿಗಳು: ನಾಲ್ಕು ವರ್ಷಗಳ ಪದವಿ ಯೋಜನೆಯನ್ನು ರದ್ದು ಮಾಡುವುದಿಲ್ಲ ಎಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ಭರವಸೆ ನೀಡಿದ್ದರಿಂದ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ಕೈಬಿಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.