ಪಿಎಚ್.ಡಿ ಹಾಗೂ ಇತರ ಸಂಶೋಧನಾ ಪ್ರಬಂಧಗಳಲ್ಲಿ ಕೃತಿಚೌರ್ಯ ಹಾವಳಿ ತಡೆಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯು.ಜಿ.ಸಿ.) ಮುಂದಾಗಿದೆ. ಈ ಸಂಬಂಧದಲ್ಲಿ ಅನೇಕ ಕಠಿಣ ನಿಯಮಾವಳಿಗಳು ಹಾಗೂ ಮಾರ್ಗಸೂಚಿಗಳನ್ನು ಕಾನ್ಪುರ ಐ.ಐ.ಟಿ.ಯ ಮಾಜಿ ನಿರ್ದೇಶಕ ಸಂಜಯ್ ದಾಂಡೆ ನೇತೃತ್ವದಲ್ಲಿ ಯು.ಜಿ.ಸಿ.ಯಿಂದ ನೇಮಕವಾಗಿರುವ ಉನ್ನತ ಮಟ್ಟದ ಸಮಿತಿ ಸಿದ್ಧಪಡಿಸಿದೆ.
ಸಂಶೋಧನಾ ಕ್ಷೇತ್ರದಲ್ಲಿ ನಡೆಯುವ ಕೃತಿಚೌರ್ಯಕ್ಕೆ ವಿವಿಧ ಹಂತದ ಶಿಕ್ಷೆಗಳ ಶಿಫಾರಸಿಗೆ ಈ ಸಮಿತಿ ಮುಂದಾಗಿರುವುದು ಸ್ವಾಗತಾರ್ಹ. ಸಂಶೋಧನೆಯನ್ನು ಅರಿವಿನ ಶೋಧದ ಪವಿತ್ರ ಕಾರ್ಯ ಎಂದೇ ಪರಿಗಣಿಸಲಾಗಿದೆ. ಆದರೆ ದೇಶದ ಸಂಶೋಧನಾ ಕ್ಷೇತ್ರದಲ್ಲಿ ಅಕ್ರಮ ಮತ್ತು ಕೃತಿಚೌರ್ಯ ವ್ಯಾಪಕವಾಗಿರುವುದು ಆತಂಕದ ವಿಷಯ.
ವಿಶ್ವವಿದ್ಯಾಲಯಗಳಲ್ಲಿ ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆ ನಡೆಸುವವರು ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತೂ ದಾಂಡೆ ಸಮಿತಿ ಸಲಹೆ ನೀಡಿದೆ. ಕೃತಿಚೌರ್ಯವನ್ನು ತಡೆಯಲು ಈವರೆಗೆ ಸೂಕ್ತವಾದ ಯಾವುದೇ ಮಾರ್ಗೋಪಾಯ ಇರಲಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ.
ಸಂಶೋಧನೆಯಲ್ಲಿ ತೊಡಗುವವರಲ್ಲಿ ಸಾಮರ್ಥ್ಯ ಮತ್ತು ಕೌಶಲಗಳ ಜತೆಗೆ ಪ್ರಾಮಾಣಿಕತೆ ಇರುವುದೂ ಅವಶ್ಯ. ಅವರು ನಡೆಸುವ ಶೋಧ ಕಾರ್ಯ ಸ್ವಂತ ಪ್ರಯತ್ನದ್ದಾಗಿರಬೇಕು. ಆಗ ಅದು ವಿದ್ವತ್ ವಲಯದಲ್ಲಿ ಮನ್ನಣೆ ಪಡೆಯುತ್ತದೆ. ಆದರೆ ಕೃತಿಚೌರ್ಯವು ಹೀನವಾದ ಕಾರ್ಯ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ದೇಶದ ಘನತೆಯನ್ನೂ ತಳಮಟ್ಟಕ್ಕೆ ಇಳಿಸುವಂತಹದ್ದು.
ಪಿಎಚ್.ಡಿ ಪದವಿಗೆ ಪ್ರೌಢ ಪ್ರಬಂಧವನ್ನು ಹಾಗೂ ಸಂಶೋಧನಾ ಪತ್ರಿಕೆಗಳಿಗೆ ಲೇಖನಗಳನ್ನು ಸಲ್ಲಿಸುವ ಮೊದಲೇ ತಮ್ಮ ಕೆಲಸ ಅಸಲಿಯೇ ಹೊರತು ಯಾವುದೇ ಕೃತಿಚೌರ್ಯವಲ್ಲ ಎಂಬ ಮುಚ್ಚಳಿಕೆಯನ್ನು ವಿದ್ಯಾರ್ಥಿಗಳು ಬರೆದುಕೊಡಬೇಕೆಂದು ಈ ಸಮಿತಿ ಮಾಡಿರುವ ಸಲಹೆ ಸೂಕ್ತವಾದದ್ದು. ಒಂದು ವೇಳೆ ಕೃತಿಚೌರ್ಯದ ಲೇಖನಗಳು ಅಚ್ಚಾಗಿಬಿಟ್ಟರೆ ಆಗ ಸಂಶೋಧಕರ ಜತೆಗೆ ಅವರ ಮಾರ್ಗದರ್ಶಕರ ಮೇಲೂ ಶಿಸ್ತುಕ್ರಮ ಜರುಗಿಸಬಹುದು.
ಕೃತಿಚೌರ್ಯವನ್ನು ಪತ್ತೆ ಮಾಡುವ ತಂತ್ರಾಂಶಗಳು ಲಭ್ಯವಿದ್ದು, ಅವುಗಳ ಬಳಕೆಗೂ ಸಮಿತಿ ಸಲಹೆ ನೀಡಿದೆ. ಮೂಲ ಲೇಖಕರ ಹೆಸರನ್ನು ಸೂಚಿಸದೆ ನೇರವಾಗಿ ಅವರ ಸಾಲುಗಳನ್ನು ಬಳಸಿಕೊಳ್ಳುವುದು, ಲೇಖಕರ ಅಥವಾ ಪ್ರಕಾಶಕರ ಅನುಮತಿ ಇಲ್ಲದೆ ಚಿತ್ರಗಳನ್ನು ಉಪಯೋಗಿಸುವುದು, ಬೇರೆಯವರು ಸಂಗ್ರಹಿಸಿದ ಮಾಹಿತಿಯನ್ನು ಕದ್ದು ಬಳಸುವುದು, ಇತರರ ಫಲಿತಾಂಶಗಳನ್ನು ತಮ್ಮದೆಂದು ಬಿಂಬಿಸಿಕೊಳ್ಳುವುದು– ಈ ನಾಲ್ಕು ಬಗೆಯ ಕೃತಿಚೌರ್ಯದ ಅಪರಾಧಗಳನ್ನು ಗಮನಿಸಿರುವ ಸಮಿತಿಯು, ವಿವಿಧ ಹಂತದ ಶಿಕ್ಷೆಗಳನ್ನೂ ಸೂಚಿಸಿದೆ.
ಯು.ಜಿ.ಸಿ.ಗೆ ಸಲ್ಲಿಸಲಾಗಿರುವ ಈ ಸಲಹೆಗಳು ಮುಂದಿನ ದಿನಗಳಲ್ಲಿ ಸ್ವೀಕೃತವಾದರೆ ಗಂಭೀರವಾಗಿ ಸಂಶೋಧನಾ ಕಾರ್ಯದಲ್ಲಿ ತೊಡಗುವವರಿಗೆ ಇನ್ನಷ್ಟು ಅವಕಾಶಗಳು ದೊರೆಯಬಹುದು. ಹಾಗೆಯೇ ಜಾಗತಿಕ ಶಿಕ್ಷಣ ರಂಗದಲ್ಲಿ ಭಾರತ ಬೌದ್ಧಿಕವಾಗಿ ಕಳಂಕರಹಿತವಾದ ಛಾಪು ಮೂಡಿಸಬಹುದು. ಸಂಶೋಧನೆಯಲ್ಲಿ ಮತ್ತು ಪಿಎಚ್.ಡಿ ಪದವಿಗಳಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಇದೊಂದು ಉತ್ತಮ ಪ್ರಯತ್ನವೆಂದೇ ಹೇಳಬಹುದು. ಈ ದಿಸೆಯಲ್ಲಿ ಯು.ಜಿ.ಸಿ., ದಾಂಡೆ ಸಮಿತಿಯ ಶಿಫಾರಸುಗಳನ್ನು ಸ್ವೀಕರಿಸುವುದು ದೇಶದ ಬೌದ್ಧಿಕ ಪ್ರಗತಿಯ ದೃಷ್ಟಿಯಿಂದ ಒಳ್ಳೆಯದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.