ಬೆಂಗಳೂರು: ಯಾವುದೇ ಕೃತಿಯನ್ನು ಏಕಾಏಕಿ ನಿಷೇಧಿಸುವುದು ಸರಿಯಲ್ಲ ಎಂದು ಸಾಂಸ್ಕೃತಿಕ ನೀತಿ ನಿರೂಪಣಾ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿ ತಿಂಗಳು ಕಳೆದಿದೆ. ಸಮಿತಿಯ ಶಿಫಾರಸು ಸಾರ್ವಜನಿಕರ ಮುಂದಿರುವ ಸಂದರ್ಭದಲ್ಲಿ ಸರ್ಕಾರ ಡಾ.ಕೆ.ಎಸ್. ನಾರಾಯಣಾಚಾರ್ಯ ಅವರ ‘ವಾಲ್ಮೀಕಿ ಯಾರು?’ ಕೃತಿ ಮುಟ್ಟುಗೋಲು ಹಾಕಲು ತೀರ್ಮಾನಿಸಿದೆ. ಇದನ್ನು ಸಾಹಿತಿಗಳು, ಬರಹಗಾರರು ಖಂಡಿಸಿದ್ದಾರೆ.
‘ಸರ್ಕಾರ ಯಾವುದೇ ಕೃತಿಯನ್ನು ಏಕಾಏಕಿ ನಿಷೇಧಿಸಬಾರದು. ತಜ್ಞರ ಸಮಿತಿ ರಚಿಸಿ, ಅಭಿಪ್ರಾಯ ಪಡೆದು ಮುಂದುವರಿಯಬೇಕು’ ಎಂದು ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಾಂಸ್ಕೃತಿಕ ನೀತಿ ನಿರೂಪಣಾ ಸಮಿತಿ ಕರಡು ಶಿಫಾರಸಿನಲ್ಲಿ ಹೇಳಿದೆ. ಇದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರಿಗೆ ಜೂನ್ 25ರಂದು ಸಲ್ಲಿಸಲಾಗಿದೆ.
ಆದರೆ, ಕಾಂಗ್ರೆಸ್ಸಿನ ವಿ.ಎಸ್. ಉಗ್ರಪ್ಪ ಅವರು ವಿಧಾನ ಪರಿಷತ್ತಿನಲ್ಲಿ ತಂದ ಒತ್ತಡಕ್ಕೆ ಸರ್ಕಾರ ಮಣಿಯಿತು. ‘ವಾಲ್ಮೀಕಿ ಯಾರು?’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಸಭಾ ನಾಯಕ ಎಸ್.ಆರ್. ಪಾಟೀಲ ಅವರು ಸದನದಲ್ಲಿ ಕಳೆದ ವಾರ ಪ್ರಕಟಿಸಿದರು.
‘ಕೋಮುವಾದಿ ಅಲ್ಲದ ಕಾಂಗ್ರೆಸ್ ಸರ್ಕಾರ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗೌರವಿಸಬೇಕಿತ್ತು. ಆಲೋಚನಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದು ಸರಿಯಲ್ಲ’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಬಂಜಗೆರೆ ಜಯಪ್ರಕಾಶ್ ಅವರು ಪುಸ್ತಕ ನಿಷೇಧ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.
ಜಯಪ್ರಕಾಶ್ ಅವರ ‘ಆನುದೇವಾ ಹೊರಗಣವನು’ ಕೃತಿಯನ್ನು ಬಿಜೆಪಿ ಸರ್ಕಾರ ನಿಷೇಧಿಸಿತ್ತು.
ಪುಸ್ತಕದ ಮೂಲಕ ವಿಚಾರ ಹೇಳುವುದಕ್ಕೂ ಸಾರ್ವಜನಿಕ ಭಾಷಣದ ಮೂಲಕ ಹೇಳುವುದಕ್ಕೂ ವ್ಯತ್ಯಾಸ ಇದೆ. ಸಾರ್ವಜನಿಕ ಭಾಷಣದ ಮೂಲಕ ಸಭಿಕರನ್ನು ಉದ್ರೇಕಿಸುವ ಸಾಧ್ಯತೆ ಹೆಚ್ಚು. ಆದರೆ ಓದಿನ ಹವ್ಯಾಸ ಉಳ್ಳವರು ಸಾಮಾನ್ಯವಾಗಿ ಉದ್ರೇಕಗೊಳ್ಳುವುದಿಲ್ಲ. ಯಾವುದೇ ಕೃತಿಯನ್ನು ಏಕಾಏಕಿ ಮುಟ್ಟುಗೋಲು ಹಾಕಿಕೊಳ್ಳುವುದು ಸರಿಯಲ್ಲ ಎಂದು ಜಯಪ್ರಕಾಶ್ ಹೇಳಿದರು.
‘ದುರುದ್ದೇಶದ ಪುಸ್ತಕ’: ‘ವಾಲ್ಮೀಕಿ ಯಾರು?’ ಕೃತಿ ದುರುದ್ದೇಶದ್ದು. ಸಂಶೋಧನೆ ಅಥವಾ ವಿಶ್ಲೇಷಣೆಯ ಘನತೆಯಿಲ್ಲದ ಆಕ್ಷೇಪಾರ್ಹ ಅಸಂಬದ್ಧತೆಗಳನ್ನು ಒಳಗೊಂಡ ಕೃತಿ ಅದು. ಆದರೂ ಸರ್ಕಾರ ಯಾವುದೇ ಕೃತಿಯನ್ನು ತಜ್ಞರ ಪರಿಶೀಲನೆಗೆ ಒಪ್ಪಿಸಿ, ಸಲಹೆ ಪಡೆಯದೆ ಮುಟ್ಟುಗೋಲು ಹಾಕಿಕೊಳ್ಳುವುದು ಸರಿಯಲ್ಲ’ ಎಂದು ಪ್ರೊ. ಬರಗೂರು ರಾಮಚಂದ್ರಪ್ಪ ಅನಿಸಿಕೆ ವ್ಯಕ್ತಪಡಿಸಿದರು.
ಅಭಿಪ್ರಾಯ ಆಹ್ವಾನ: ಸಾಂಸ್ಕೃತಿಕ ನೀತಿ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಲಾಗಿದೆ. ಅವುಗಳನ್ನು ಸ್ವೀಕರಿಸಿದ ನಂತರ ನೀತಿಯನ್ನು ಸರ್ಕಾರ ಅಳವಡಿಸಿಕೊಳ್ಳಲಿದೆ ಎಂದು ಸಚಿವೆ ಉಮಾಶ್ರೀ ತಿಳಿಸಿದರು.
ಒಂದು ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುವ ಅಂಶಗಳಿರುವ ಕೃತಿ ಕುರಿತು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಆ ಸಮುದಾಯ ಬೀದಿಗಿಳಿಯಬಹುದು. ಶಾಂತಿ ಭಂಗವಾಗಬಹುದು. ಈ ಎಲ್ಲ ವಿಚಾರಗಳ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ ಆಗಿದೆ ಎಂದು ಸಚಿವ ಪಾಟೀಲ ಸರ್ಕಾರದ ಕ್ರಮ ಸಮರ್ಥಿಸಿಕೊಂಡರು.
ಪಿ.ವಿ. ನಾರಾಯಣ ಅವರ ‘ಧರ್ಮಕಾರಣ’ ಕೃತಿಯನ್ನೂ ಕೂಡ ಸರ್ಕಾರ ನಿಷೇಧಿಸಿತ್ತು. ಅದೇ ರೀತಿ, ಯೋಗೇಶ್ ಮಾಸ್ಟರ್ ಅವರ ‘ಢುಂಡಿ’ ಕಾದಂಬರಿಯ ಮಾರಾಟವನ್ನು ನ್ಯಾಯಾಲಯ ನಿರ್ಬಂಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ನಿಷೇಧ ಸರಿ
‘ವಾಲ್ಮೀಕಿ ಯಾರು?’ ಕೃತಿಯಿಂದ ತಮ್ಮ ಭಾವನೆಗಳಿಗೆ ನೋವಾಗಿದೆ ಎಂದು ನಿರ್ದಿಷ್ಟ ಸಮುದಾಯದ ಜನ ಪ್ರತಿಭಟನೆ ನಡೆಸಿದ್ದರು. ಹಾಗಾಗಿ ಕೃತಿ ಮುಟ್ಟುಗೋಲಿಗೆ ನಿರ್ಧರಿಸಲಾಯಿತು.
-–ಸಚಿವೆ ಉಮಾಶ್ರೀ
ನಿಷೇಧ ತಪ್ಪು
ಕೃತಿಯ ನಿಷೇಧ ಖಂಡಿತ ಸರಿಯಲ್ಲ. ಕೃತಿಯಲ್ಲಿರುವ ತಪ್ಪುಗಳನ್ನು ಖಂಡಿಸಲು ಸಾತ್ವಿಕವಾದ ಮಾರ್ಗಗಳಿವೆ. ಯಾವುದೇ ಲೇಖಕ
ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಮಾಡಿದ್ದರೆ, ಅದನ್ನು ವೈಚಾರಿಕ ಮಾರ್ಗದಲ್ಲಿ ಬಯಲುಗೊಳಿಸಬೇಕು. ಆ ಲೇಖಕನನ್ನು ವೈಚಾರಿಕವಾಗಿಯೇ ಎದುರಿಸಬೇಕು.
–ಪ್ರೊ. ಹಂಪ ನಾಗರಾಜಯ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.