ಬೆಂಗಳೂರು: ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ 119 ಎಕರೆ 02 ಗುಂಟೆ ಜಮೀನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯ ವಕೀಲರ ವಿಭಾಗದ ಸದಸ್ಯ ನಟರಾಜ್ ಶರ್ಮ, ಈ ಸಂಬಂಧ ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ ವಿಚಾರಣಾ ಆಯೋಗಕ್ಕೆ 810 ಪುಟಗಳ ದಾಖಲೆ ಸಲ್ಲಿಸಿದರು.
ಬಿಜೆಪಿಯ ವಕೀಲರ ವಿಭಾಗದ ಮತ್ತೊಬ್ಬ ಸದಸ್ಯ ಎಸ್.ದೊರೈರಾಜು ಅವರೊಂದಿಗೆ ಸೋಮವಾರ ಆಯೋಗದ ಕಚೇರಿಗೆ ಬಂದ ಶರ್ಮ, ಆಯೋಗದ ಕಾರ್ಯದರ್ಶಿ ಎಸ್.ಶ್ರೀವತ್ಸ ಕೆದಿಲಾಯ ಅವರಿಗೆ ದಾಖಲೆಗಳನ್ನು ಸಲ್ಲಿಸಿದರು. ಈ ದಾಖಲೆಗಳನ್ನು ಆಧರಿಸಿ ವಿಚಾರಣೆ ನಡೆಸುವಂತೆಯೂ ಮನವಿ ಮಾಡಿದರು.
ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಶರ್ಮ, ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಸಿದ್ದರಾಮಯ್ಯ ಅವರು ಕಾನೂನಿಗೆ ವಿರುದ್ಧವಾಗಿ ಡಿನೋಟಿಫೈ ಮಾಡಿದ್ದಾರೆ. ‘ರೀ ಡು’ ಎಂಬ ಹೆಸರಿನಲ್ಲಿ ಬೇಕಾಬಿಟ್ಟಿಯಾಗಿ ಡಿನೋಟಿಫಿಕೇಷನ್ ನಡೆದಿದೆ. ಈ ಎಲ್ಲ ಆರೋಪಗಳಿಗೆ ಪೂರಕವಾಗಿ ಆಯೋಗಕ್ಕೆ ದಾಖಲೆ ನೀಡಿದ್ದೇವೆ’ ಎಂದರು.
119 ಎಕರೆ 02 ಗುಂಟೆ ಜಮೀನನ್ನು ಯೋಜನೆಯಿಂದ ಕೈಬಿಡಲು ಅವಕಾಶವೇ ಇರಲಿಲ್ಲ. ಆದರೂ, ಅಕ್ರಮವಾಗಿ ಡಿನೋಟಿಫೈ ಮಾಡಲಾಗಿದೆ. ಸಿದ್ದರಾಮಯ್ಯ ಅವರ ಈ ತೀರ್ಮಾನದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಿದೆ ಎಂದು ದೂರಿದರು.
ಯಾವುದೇ ಆಧಾರಗಳಿಲ್ಲದೇ 119 ಎಕರೆ 02 ಗುಂಟೆಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ ಎಂಬುದನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಬಿಡಿಎಯಿಂದ ಪಡೆದಿರುವ ದಾಖಲೆಗಳು ಸಾಬೀತು ಮಾಡುತ್ತವೆ. ಇನ್ನೂ ಹಲವು ದಾಖಲೆಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳಿಂದ ಆ ದಾಖಲೆಗಳನ್ನು ಪಡೆದು, ವಿಚಾರಣೆ ನಡೆಸುವಂತೆ ಕೋರಲಾಗಿದೆ ಎಂದರು.
ಮತ್ತೊಂದು ದೂರು: ಇದೇ ವೇಳೆ ನಗರದ ಅಶೋಕ್ ಕುಮಾರ್ ಎಂಬುವರು ಆಯೋಗದ ಕಾರ್ಯದರ್ಶಿಯವರನ್ನು ಭೇಟಿಮಾಡಿ ಮುಖ್ಯಮಂತ್ರಿಯವರ ವಿರುದ್ಧ ದೂರು ನೀಡಿದರು. ಕೆಲವು ವ್ಯಕ್ತಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಮುಖ್ಯಮಂತ್ರಿಯವರು ಹಲವು ಜಮೀನುಗಳನ್ನು ಡಿನೋಟಿಫೈ ಮಾಡಿದ್ದಾರೆ ಎಂಬ ಆರೋಪ ಅವರ ದೂರಿನಲ್ಲಿದೆ.
‘ಅರ್ಕಾವತಿ ಬಡಾವಣೆಗೆ ಗುರುತಿಸಿದ್ದ ಜಮೀನನ್ನು ಡಿನೋಟಿಫೈ ಮಾಡುವ ಕೆಲಸ 2003ರಿಂದಲೇ ಆರಂಭವಾಗಿತ್ತು. ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಒಂದೇ ಬಾರಿ 589 ಎಕರೆ 12 ಗುಂಟೆ ಜಮೀನನ್ನು ಕೈಬಿಟ್ಟಿದ್ದರು. ಹೀಗಾಗಿ ಈ ಯೋಜನೆಯ ಆರಂಭದಿಂದ ಈವರೆಗೆ ಬಿಡಿಎ ಆಯುಕ್ತರ ಹುದ್ದೆಯಲ್ಲಿದ್ದ ಎಲ್ಲ ಅಧಿಕಾರಿಗಳ ವಿಚಾರಣೆಯನ್ನೂ ನಡೆಸಬೇಕು’ ಎಂದು ಮನವಿ ಮಾಡಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿಗಳಾದ ಜೈಕರ್ ಜೆರೋಮ್, ಸಿದ್ದಯ್ಯ, ಎಂ.ಕೆ.ಶಂಕರಲಿಂಗೇಗೌಡ, ಐಎಎಸ್ ಅಧಿಕಾರಿ ಭರತ್ಲಾಲ್ ಮೀನಾ, ಬಿಡಿಎ ಈಗಿನ ಆಯುಕ್ತ ಟಿ.ಶ್ಯಾಂಭಟ್ ಅವರನ್ನು ವಿಚಾರಣೆ ನಡೆಸಬೇಕು ಎಂದು ಅಶೋಕ್ ಕುಮಾರ್ ಆಗ್ರಹಿಸಿದ್ದಾರೆ.
‘ಕೆಲವು ಜಮೀನುಗಳನ್ನು ಬಿಡಿಎಯಿಂದ ಶಿಫಾರಸು ಪಡೆದು ಮೂರೇ ದಿನಗಳಲ್ಲಿ ಡಿನೋಟಿಫೈ ಮಾಡಲಾಗಿದೆ. ಉದ್ಯಮಿ ತೇಜರಾಜ್ ಗುಲ್ಲೇಚ ಎಂಬುವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಜಮೀನುಗಳನ್ನು ಡಿನೋಟಿಫೈ ಮಾಡಲಾಗಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
‘ಇನ್ನೊಂದು ಪ್ರಕರಣದಲ್ಲಿ ಮೊದಲು 35 ಎಕರೆ ಎರಡೂವರೆ ಗುಂಟೆ ಜಮೀನನ್ನು ಡಿನೋಟಿಫಿಕೇಷನ್ ಕೋರಿಕೆ ಕುರಿತು ಮರು ಸ್ಥಳಪರಿಶೀಲನೆಗೆ ಶಿಫಾರಸು ಮಾಡಲಾಗಿತ್ತು. ನಂತರ ಅದನ್ನು 54 ಎಕರೆಗೆ ಹೆಚ್ಚಿಸಲಾಗಿದೆ. ಈ ಜಮೀನುಗಳಿಗೆ ಸಂಬಂಧಿಸಿದಂತೆ ಬಿಡಿಎ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿದ್ದಾರೆ’ ಎಂದು ಅಶೋಕ್ ಕುಮಾರ್ ದೂರಿದ್ದಾರೆ.
ಕೈಪಿಡಿ ಸಲ್ಲಿಕೆ: ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಅಧ್ಯಕ್ಷ ಸಿ.ಎಂ.ಧನಂಜಯ ಅವರು ಕೂಡ ಆಯೋಗದ ಕಾರ್ಯದರ್ಶಿಯನ್ನು ಭೇಟಿ ಮಾಡಿದರು. ಅರ್ಕಾವತಿ ಬಡಾವಣೆ ಜಮೀನಿನ ಡಿನೋಟಿಫಿಕೇಷನ್ ವಿಚಾರದಲ್ಲಿ ಸಿದ್ದರಾಮಯ್ಯ ಅವರು ತಪ್ಪೆಸಗಿಲ್ಲ ಎಂಬ ಸಮಜಾಯಿಷಿಯೊಂದಿಗೆ ಪ್ರಕಟಿಸಿರುವ ‘ಅರ್ಕಾವತಿ ವಾಸ್ತವ ವರದಿ’ ಹೆಸರಿನ ಕೈಪಿಡಿಯನ್ನು ಆಯೋಗಕ್ಕೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.