ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಐಎಎಸ್ ಅಧಿಕಾರಿ ಎಸ್.ಎನ್.ಜಯರಾಂ ಅವರನ್ನು ನೇಮಕ ಮಾಡಿ ಹೊರಡಿಸಿದ್ದ ರಾಜ್ಯ ಸರ್ಕಾರದ ಆದೇಶ ಸರಿಯಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಎಸ್.ಎನ್. ಜಯರಾಮ್ ಅವರನ್ನು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಮಾಡಿ ರಾಜ್ಯ ಸರ್ಕಾರ ಜ.೩೦ರಂದು ಆದೇಶ ಹೊರಡಿಸಿತ್ತು. ಆದರೆ ಈ ನೇಮಕವನ್ನು ಕೆಎಂಎಫ್ ಆಡಳಿತ ಮಂಡಳಿಯಿಂದ ಇದೇ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ
ನೇಮಕಗೊಂಡಿದ್ದ ಐ.ಆರ್.ರಾಮಲಿಂಗೇ ಗೌಡ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಇದರಿಂದಾಗಿ ಜಯರಾಂ ಅವರ ನೇಮಕಕ್ಕೆ ಏಕಸದಸ್ಯ ಪೀಠವು ತಡೆಯಾಜ್ಞೆ ನೀಡಿತ್ತು.
ಈ ತಡೆಯಾಜ್ಞೆ ತೆರವುಗೊಳಿಸುವಂತೆ ರಾಜ್ಯ ಸರ್ಕಾರ ಮಧ್ಯಾಂತರ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಜಿ.ರಮೇಶ್ ಅವರಿದ್ದ ಏಕಸದಸ್ಯ ಪೀಠವು ಶುಕ್ರವಾರ ಮಾನ್ಯ ಮಾಡಿತು. ‘ಕೆಎಂಎಫ್ನಲ್ಲಿ ರಾಜ್ಯ ಸರ್ಕಾರದ ಪಾಲುದಾರಿಕೆಯೂ ಮಹತ್ವದ್ದಾಗಿದೆ.
ಆರ್ಥಿಕ ನೆರವು ಸೇರಿದಂತೆ ಸರ್ಕಾರ ಗಮನಾರ್ಹ ರೀತಿಯಲ್ಲಿ ನೆರವು ನೀಡುತ್ತಿದೆ. ಹೀಗಾಗಿ ಇಂತಹ ನೇಮಕ ಮಾಡಲು ಸರ್ಕಾರ ಅಧಿಕಾರ ಹೊಂದಿದೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ. ಆದೇಶದ ಪ್ರತಿ ಸಿಕ್ಕ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವುದಾಗಿ ಜಯರಾಂ ‘ಪ್ರಜಾವಾಣಿ’ಗೆ ತಿಳಿಸಿದರು.