ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸಿದ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ಎಸಗಿದ ಆರೋಪ ಎದುರಿಸುತ್ತಿರುವ ಆಯೋಗದ ಐವರು ಸದಸ್ಯರನ್ನು ತಕ್ಷಣ ಅಮಾನತು ಮಾಡಿ, ಅವರ ವಿರುದ್ಧ ಕಾನೂನು ಕ್ರಮಕ್ಕೆ ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಲು ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈಗಾಗಲೇ ಅಮಾನತುಗೊಂಡಿರುವ ಆಯೋಗದ ಸದಸ್ಯೆ ಮಂಗಳಾ ಶ್ರೀಧರ್ ಹಾಗೂ ನಿವೃತ್ತ ಸದಸ್ಯರಾದ ಡಾ.ಬಿ.ಎಸ್. ಕೃಷ್ಣಪ್ರಸಾದ್, ಎನ್.ರಾಮಕೃಷ್ಣ ಮತ್ತು ಬಿ.ಪಿ.ಕನಿರಾಂ ಅವರ ವಿರುದ್ಧವೂ ಕಾನೂನು ಕ್ರಮಕ್ಕಾಗಿ ರಾಷ್ಟ್ರಪತಿಗಳ ಅನುಮತಿ ಪಡೆಯುವುದಕ್ಕೆ ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
‘ವಿವಿಧ ವೃಂದದ 362 ಮಂದಿ ಅಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ದೂರುಗಳು ಬಂದ ನಂತರ ಅದನ್ನು ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ವಹಿಸಿತ್ತು. ಸಿಐಡಿ ಪೊಲೀಸರು ಕೊಟ್ಟಿರುವ ವರದಿಯಲ್ಲಿ ಈ ಎಲ್ಲ ಒಂಬತ್ತು ಸದಸ್ಯರೂ ಅಕ್ರಮ ಎಸಗಿದ್ದಾರೆಂದು ಹೇಳಲಾಗಿತ್ತು. ಅದನ್ನೇ ಆಧಾರವಾಗಿ ಇಟ್ಟಕೊಂಡು ಈ ಎಲ್ಲ ಸದಸ್ಯರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ’ ಎಂದು ಅವರು ವಿವರಿಸಿದರು.
‘ಈ ಹಿಂದೆ ಮಂಗಳಾ ಶ್ರೀಧರ್ ಅವರನ್ನು ರಾಜ್ಯಪಾಲರು ಅಮಾನತು ಮಾಡಿದ್ದನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಆದರೆ, ಅವರ ವಿರುದ್ಧ ಕಾನೂನು ಕ್ರಮಕ್ಕೆ ಇದುವರೆಗೂ ರಾಷ್ಟ್ರಪತಿಗಳ ಅನುಮತಿಗಾಗಿ ಕಳುಹಿಸಿರಲಿಲ್ಲ. ಕೆಪಿಎಸ್ಸಿ ಸದಸ್ಯರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ರಾಷ್ಟ್ರಪತಿಗಳ ಅನುಮತಿ ಕಡ್ಡಾಯ. ಈ ಕಾರಣದಿಂದಲೇ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಪತ್ರ ಕಳಿಸಲಾಗುವುದು’ ಎಂದು ಅವರು ವಿವರಿಸಿದರು.
ಕಾರ್ಯದರ್ಶಿ ವಿರುದ್ಧವೂ ಕ್ರಮ: ಅಕ್ರಮ ನಡೆದಾಗ ಇದ್ದ ಕೆಪಿಎಸ್ಸಿ ಕಾರ್ಯದರ್ಶಿ ವಿರುದ್ಧವೂ ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಹೊಸದಾಗಿ ಅಮಾನತಾದವರು
ಎಸ್.ಆರ್.ರಂಗಮೂರ್ತಿ
ಡಾ.ಎನ್.ಮಹದೇವ
ಡಾ.ಎಚ್.ವಿ.ಪಾರ್ಶ್ವನಾಥ
ಎಸ್.ದಯಾಶಂಕರ
ಡಾ.ಎಚ್.ಡಿ.ಪಾಟೀಲ್
(ಮಂಗಳಾ ಶ್ರೀಧರ್ ಈಗಾಗಲೇ ಅಮಾನತುಗೊಂಡಿದ್ದಾರೆ)