ಮಾಗಡಿ: ‘ತಾಲ್ಲೂಕಿನಲ್ಲಿ ಅಕ್ರಮವಾಗಿ ಒತ್ತುವರಿಯಾಗಿರುವ ಕೆರೆ, ಗೋಕಟ್ಟೆ, ಗುಂಡುತೋಪು, ಗೋಮಾಳ, ಖರಾಬ್ ಜಮೀನುಗಳನ್ನು ಒತ್ತುವರಿದಾರರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ತೆರವು ಮಾಡುವ ಮೂಲಕ ಆಂದೋಲನಕ್ಕೆ ಸಹಕಾರ ನೀಡಬೇಕು’ ಎಂದು ತಹಶೀಲ್ದಾರ್ ಸಿ.ಎಚ್.ಶಿವಕುಮಾರ್ ಹೇಳಿದರು.
ತಾಲ್ಲೂಕಿನ ಊಜುಗಲ್ಲು ಗ್ರಾಮದ ಅಗಸನ ಕಟ್ಟೆ ಕೆರೆಯ ಒತ್ತುವರಿ ತೆರವು ಆಂದೋಲನಕ್ಕೆ ಸೋಮವಾರ ಕೆರೆಯಂಗಳದಲ್ಲಿ ಸಸಿ ನೆಟ್ಟು ಅವರು ಚಾಲನೆ ನೀಡಿದರು.
‘ಅಗಸನ ಕಟ್ಟೆಯ ಕೆರೆಯ ಏರಿ ಒಡೆದುದ್ದರಿಂದ 30 ಗುಂಟೆ ಕೆರೆಯಂಗಳವನ್ನು ಒತ್ತುವರಿ ಮಾಡಲಾಗಿದೆ. ಒಟ್ಟು ಕೆರೆಯ ವಿಸ್ತೀರ್ಣ 2.25 ಗುಂಟೆ ಇದೆ. ಹಿಂದಿನವರು ಹಾಕಿದ್ದ ಪಾಣಿಕಟ್ಟುಗಳಿವೆ. ಆದರೂ ಈ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಚಲುವಯ್ಯ ಎಂಬಾತ ಕೆರೆಗೆ ಸೇರಿದ್ದ 20 ಗುಂಟೆಯಷ್ಟು ಕೆರೆಯ ಏರಿಯ ಭಾಗವನ್ನು ಒತ್ತುವರಿ ಮಾಡಿಕೊಂಡಿದ್ದನ್ನು ಇಂದು ಗುರುತಿಸಿ ತೆರವು ಗೊಳಿಸಲಾಗಿದೆ. ತಾಲ್ಲೂಕಿನಲ್ಲಿ ಒತ್ತುವರಿಯಾಗಿರುವ ಎಲ್ಲಾ ಕೆರೆಗಳ ಒತ್ತುವರಿಯನ್ನು ಯಾವ ಮುಲಾಜು ನೋಡದೆ ತೆರವು ಗೊಳಿಸುವಂತೆ ಕೆರೆ ಒತ್ತುವರಿ ಆಂದೋಲನ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಊಜುಗಲ್ಲು ಕೆರೆಯ ಬಳಿ ಒತ್ತುವರಿಯಾಗಿರುವ ಕಂಚಿನ ಕಟ್ಟೆ ಕೆರೆಯನ್ನು ಸಹ ಒತ್ತುವರಿ ತೆರವುಗೊಳಿಸುವಂತೆ ಗ್ರಾಮದ ರೈತರಾದ ಕುಮಾರ್, ಗಂಗಭೋರಮ್ಮ, ಗುಡ್ಡದಯ್ಯ ತಹಶೀಲ್ದಾರ್ ಅವರಲ್ಲಿ ಮನವಿ ಮಾಡಿದರು. ತಾಲ್ಲೂಕು ಸರ್ವೇಯರ್ ಪ್ರಭಾಕರ್, ಕಂದಾಯ ಅಧಿಕಾರಿ ವೆಂಕಟೇಶ್, ಕಾಳಾರಿ ಗ್ರಾಮದ ಗ್ರಾಮ ಲೇಖಪಾಲಕರಾದ ಚೈತ್ರಾ ಹಾಗೂ ಗ್ರಾಮದ ರೈತರು ಭಾಗವಹಿಸಿದ್ದರು.