ಬೆಂಗಳೂರು: ಕಲುಷಿತ ಬೆಳ್ಳಂದೂರು ಕೆರೆ ಕೋಡಿ ಕೆಳಗಿನ ರಾಜ ಕಾಲುವೆಯಲ್ಲಿ ಕೆರೆ ಕೋಡಿ ನೀರು ಸರಾಗವಾಗಿ ಹರಿದು ಹೋಗಲು ಬಿಬಿಎಂಪಿ ಕಾರ್ಮಿಕರು ಶುಕ್ರವಾರ ಜೆಸಿಬಿ ಮೂಲಕ ಕಾಲುವೆ ಹೂಳು ತೆಗೆದರು.
ಬೆಳ್ಳಂದೂರು ಕೆರೆಗೆ ಹೊಂದಿಕೊಂಡ ರಾಜ ಕಾಲುವೆ ಒತ್ತುವರಿ ಆಗಿದ್ದರಿಂದ ಕೆರೆ ನೀರು ಜಾಸ್ತಿಯಾಗಿ ಒಡೆದು ಯಮಲೂರು – ಕರಿಯಮ್ಮ ಅಗ್ರಹಾರ ರಸ್ತೆಯಲ್ಲಿ ಕೆರೆ ಕೊಳಕು ನೀರು ರಭಸದಿಂದ ಹರಿದಿತ್ತು. ಹರಿಯುವ ನೀರಿನ ನಡುವೆ ವಾಹನಗಳು ಸಿಲುಕೊಂಡಿದ್ದವು. ಬಳಿಕ ಮೂರು ದಿನಗಳ ಕಾಲ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು.
ಯಮಲೂರು ಗ್ರಾಮಸ್ಥರು ಕೋಡಿ ಸೇತುವೆ ಮೇಲೆ ಪ್ರತಿಭಟನೆ ನಡೆಸಿದರು. ಬಳಿಕ ಸದನ ಸಮಿತಿ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಆದಷ್ಟು ಬೇಗನೆ ಕೋಡಿ ಹತ್ತಿರದ ಕೊಳಕು ತೆರವುಗೊಳಿಸಬೇಕು. ಆ ನಿಟ್ಟಿನಲ್ಲಿ ರಾಜ ಕಾಲುವೆಯನ್ನು ದುರಸ್ತಿಗೊಳಿಸಬೇಕು ಎಂದು ಸಮಿತಿ ಅಧ್ಯಕ್ಷರು ಆದೇಶಿಸಿದ್ದರು.